ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 1949ರ ಆ.14ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಕರಾಳ ರಾತ್ರಿಯ ದುರಂತವನ್ನು ನೆನಪಿಸಿ ಕಳೆದು ಹೋದ ಭಾಗವನ್ನು ಮತ್ತೆ ಒಂದುಗೂಡಿಸುವ ಜನಜಾಗೃತಿ ‘ಅಖಂಡ ಭಾರತ ಸಂಕಲ್ಪ ದಿನ’ದ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಮತ್ತು ವಿಶ್ವಹಿಂದೂ ಪರಿಷದ್, ಬಜರಂಗದಳ ವತಿಯಿಂದ ‘ಪಂಜಿನ ಮೆರವಣಿಗೆ’ ಆ.14ರ ಸಂಜೆ ಪುತ್ತೂರಿನಲ್ಲಿ ನಡೆಯಿತು.

ಸಂಜೆ ದರ್ಬೆ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ ಡಾ.ಎಂ. ಕೆ.ಪ್ರಸಾದ್ ರವರು ವಿಹಿಂಪ, ಬಜರಂಗದಳ, ಜಾಗರಣ ವೇದಿಕೆ ಪ್ರಮುಖರಿಗೆ ದೊಂದಿ ಹಸ್ತಾಂತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬಜರಂಗದಳದ ನಗರ ಪ್ರಖಂಡ ಸಂಯೋಜಕ ಹರೀಶ್ ದೋಳ್ಪಾಡಿ ಮತ್ತು ಹಿಂದೂ ಜಾಗರಣ ವೇದಿಕೆ ನಗರ ಪ್ರಖಂಡ ಸಂಯೋಜಕ ಸ್ವಸ್ತಿಕ್ ರವರಿಗೆ
ದೊಂದಿ ಹಸ್ತಾಂತರಿಸಲಾಯಿತು. ಅನೇಕ ಕಾರ್ಯಕರ್ತರು ದೊಂದಿ ಮತ್ತು ಕೇಸರಿ ಧ್ವಜ ಹಿಡಿದು ಕಿಲ್ಲೆ ಮೈದಾನಕ್ಕೆ ತೆರಳಿ ಅಲ್ಲಿ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಸಮಾರೋಪ ಸಮಾರಂಭದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಪಂಜಿನ ಮೆರವಣಿಗೆಗೆ ಚಾಲನೆ ನೀಡಿದ ಡಾ. ಎಂ.ಕೆ.ಪ್ರಸಾದ್ ರವರು ಮಾತನಾಡಿ, ಭಾರತ ರಕ್ತ ರಹಿತವಾಗಿ ಸ್ವಾತಂತ್ರ್ಯ ಪಡೆದಿದೆ ಎಂದು ಯಾರಾದರೂ ಹೇಳಿದರೆ ಅವರನ್ನು ಹುಚ್ಚರ ಆಸ್ಪತ್ರೆಗೆ
ಸೇರಿಸಬೇಕು. ದೇಶಕ್ಕಾಗಿ ಎಷ್ಟೋ ಮಂದಿ ಬಲಿದಾನಗೈದಿದ್ದಾರೆ.ಈ ನಿಟ್ಟಿನಲ್ಲಿ ಇವತ್ತು ನಾವು ಮಾಡಬೇಕಾದ ಮೊದಲ ಕೆಲಸ ಒಗ್ಗಟ್ಟು, ನಾವೆಲ್ಲರೂ ಒಂದಾಗಬೇಕು, ಭೇದ ಭಾವ ಇರಬಾರದು. ಈ ದೇಶ ಹಿಂದೂ ರಾಷ್ಟ್ರವಾಗಿ ಉಳಿಯಬೇಕು ಎಂದರು.


ಸಮಾರೋಪ ಸಮಾರಂಭದಲ್ಲಿ ಸವಣೂರು ಸ.ಹಿ.ಪ್ರಾ.ಶಾಲೆಯ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ಅವರು ದಿಕ್ಕೂಚಿ ಭಾಷಣ ಮಾಡಿದರು. ಇವತ್ತು ನಮ್ಮ ದೇಶದ ಇತಿಹಾಸ ಹುಡುಕುವವರು
ಬೆರಳೆಣಿಕೆಯಷ್ಟೆ. ಉಳಿದವರು ತಮ್ಮ ಸ್ವಾರ್ಥವನ್ನು ನೋಡುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಮನ ಮನಸ್ಸು ಬದಲಾಗಬೇಕಾಗಿದೆ. ಆದರೆ ಹಿಂದು ಮಲಗಿ ನಿದ್ರಿಸಿದರೆ ಅಖಂಡ ಭಾರತದ ಕನಸು ಯಾವಾಗ..!?? ಎಂದು ಪ್ರಶ್ನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ರವರು ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶ ಭಕ್ತರ ಬಗ್ಗೆ ಬಹಳಷ್ಟು ಮಂದಿ ಕೇಳಿದ್ದಾರೆ. ಇವತ್ತು ದೇಶಭಕ್ತರೆನಿಸಿಕೊಳ್ಳುವವರು ಏನು ಮಾಡಬೇಕೆಂಬುದನ್ನು ತಿಳಿ ಹೇಳುವ ಕಾರ್ಯ ಆಗಬೇಕಾಗಿದೆ. ರಾಜಕೀಯವಾಗಿ, ಸರಕಾರಿ ಹುದ್ದೆಯಲ್ಲಿ ನಿಂತು ಇವತ್ತು ದೇಶ ಸೇವೆ ಮಾಡಬೇಕು. ಭ್ರಷ್ಟಾಚಾರ ನಡೆಯುವಲ್ಲಿ ತೆರಿಗೆ ಹಣ ಪೋಲಾಗುವಲ್ಲಿ ತಡೆಯುವ ಕೆಲಸ ಮಾಡಬೇಕು. ಆಗ ದೇಶ ಭಕ್ತ, ದೇಶ ಕಟ್ಟುವ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು.

ನಿವೃತ್ತ ಸಿಆರ್ಪಿಎಫ್ ಹವಾಲ್ದಾರ್ ವಿಜಯರ್ ಕುಮಾರ್ ಅವರನ್ನು ಸಂಘಟನೆಯಿಂದ ಸನ್ಮಾನಿಸಲಾಯಿತು. ಸನ್ಮಾನಿತ ವಿಜಯ ಕುಮಾರ್ ಅವರು ಮಾತನಾಡಿ, ದೇಶ ಸೇವೆಯನ್ನು ಸೈನ್ಯಕ್ಕೆ ಸೇರಿಯೇ ಮಾಡಬೇಕಾಗಿಲ್ಲ, ಐಪಿಎಸ್, ಐಎಎಸ್ ಆಗುವ ಮೂಲಕ ದೇಶ ಸೇವೆ ಮಾಡಿ, ಅಗ್ನಿಪಥದಂತಹ ಒಳ್ಳೆಯ ಯೋಜನೆಗೆ ಸೇರಿಕೊಳ್ಳಿ ಎಂದರು.

ವೇದಿಕೆಯಲ್ಲಿ ಬಜರಂಗದಳದ ನಗರ ಪ್ರಖಂಡ ಸಂಯೋಜಕ ಹರೀಶ್ ದೋಳ್ಪಾಡಿ ಉಪಸ್ಥಿತರಿದ್ದರು.ವಿಶ್ವಹಿಂದೂ ಪರಿಷದ್ ನಗರ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ಗಿತೇಶ್,ಪುಷ್ಪರಾಜ್, ಸೇಸಪ್ಪ ಬೆಳ್ಳಿಪ್ಪಾಡಿ, ರವಿ ಕುಮಾರ್ ಕೈತ್ತಡ್ಕ ಅತಿಥಿಗಳನ್ನು ಗೌರವಿಸಿದರು. ವಿನೋದ್ ಆಚಾರ್ಯ ವೈಯುಕ್ತಿಕ ಗೀತೆ ಹಾಡಿದರು. ಜಾಗರಣ ವೇದಿಕೆ ನಗರ ಪ್ರಖಂಡದ ಸಂಯೋಜಕ ಸ್ವಸ್ತಿಕ್ ಸ್ವಾಗತಿಸಿದರು. ವಿಶ್ವ ಹಿಂದೂ ಪರಿಷದ್ ನಗರ ಪ್ರಖಂಡದ ಸಹ ಸಂಯೋಜಕ ರೂಪೇಶ್ ಮುರ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಸಂಯೋಜಕ ದಿನೇಶ್ ಅಖಂಡ ಭಾರತ ಸಂಕಲ್ಪ ಬೋಧಿಸಿದರು. ವಿಶಾಕ್ ಶಶಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

ವಿಶ್ವ ಹಿಂದೂ ಪರಿಷದ್ ನ ಶ್ರೀಧರ್ ತೆಂಕಿಲ, ಹಿಂದು ಜಾಗರಣ ವೇದಿಕೆಯ ಪ್ರಾಂತೀಯ ಸಮಿತಿ ಸದಸ್ಯ ಚಿನ್ಮಯ್ ರೈ, ವಿಭಾಗ ಸಮಿತಿ ಸದಸ್ಯ ಅಜಿತ್ ಹೊಸಮನೆ, ಅಶೋಕ್ ತ್ಯಾಗರಾಜನಗರ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಡಾ.ಸುರೇಶ್ ಪುತ್ತೂರಾಯ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬೂಡಿಯಾರ್
ರಾಧಾಕೃಷ್ಣ ರೈ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ತಾ.ಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ, ಸುಳ್ಯ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



























