ಸುಳ್ಯ: ಸುಳ್ಯ ನಗರ ಪಂಚಾಯತ್ ನ ಮೂವರು ಕಾರ್ಮಿಕರು ಕ್ವಾರಂಟೈನ್ ನಲ್ಲಿರುವುದರಿಂದ ತ್ಯಾಜ್ಯ ಸಂಗ್ರಹಕ್ಕೆ ಸಿಬ್ಬಂದಿಗಳ ಕೊರತೆ ಎದುರಾದ ಹಿನ್ನಲೆಯಲ್ಲಿ ಸ್ವತಃ ನ.ಪಂ ಅಧ್ಯಕ್ಷರೇ ಕಸ ವಿಲೇವಾರಿಯ ವಾಹನ ಚಾಲನೆ ಮಾಡಿ ಮನೆ ಮನೆ ಕಸ ಸಂಗ್ರಹಕ್ಕೆ ತೊಡಗಿಕೊಂಡಿದ್ದಾರೆ. ಇವರಿಗೆ ನ.ಪಂ. ಆರೋಗ್ಯ ನಿರೀಕ್ಷಕ ಲಿಂಗರಾಜು ಸಾಥ್ ನೀಡುತ್ತಿದ್ದಾರೆ.
ಸುಳ್ಯ ನಗರ ಪಂಚಾಯತ್ ನ ಮೂವರು ಪೌರ ಕಾರ್ಮಿಕರು ಕ್ವಾರಂಟೈನ್ ಗೊಳಗಾಗಿರುವುದರಿಂದ ಅವರು ಮಾಡುತ್ತಿದ್ದ ಕಸ ಸಂಗ್ರಹಕ್ಕೆ ತೊಡಕುಂಟಾಗಿತ್ತು. ಈ ಸಮಸ್ಯೆ ಅರಿತ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರು ಇಂದು ಮನೆ ಮನೆ ಕಸ ಸಂಗ್ರಹದ ವಾಹನ ಚಲಾಯಿಸಿಕೊಂಡು ಒಬ್ಬ ಪೌರ ಕಾರ್ಮಿಕರನ್ನು ವಾಹನದ ಹಿಂಬದಿ ನಿಲ್ಲಿಸಿ ಕಸ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.
ಸುಳ್ಯ ನಗರ, ಎ.ಪಿ.ಎಂ. ಸಿ. ರಸ್ತೆ, ಆಯುರ್ವೇದ ರಸ್ತೆ ಜೂನಿಯರ್ ಕಾಲೇಜ್ ರಸ್ತೆ ವ್ಯಾಪ್ತಿಯಲ್ಲಿ ವಾಹನ ಚಲಾಯಿಸಿದರು.ಅಧ್ಯಕ್ಷ ವಿನಯರ ಜತೆಯಲ್ಲಿ ಆರೋಗ್ಯ ನಿರೀಕ್ಷಕರು ಇದ್ದರು. ಮನೆ ಮನೆ ಕಸ ಸಂಗ್ರಹದ ಸಂದರ್ಭ ಕಸ ತರುವವರೊಂದಿಗೆ ಮನೆಯಿಂದಲೇ ಕಸ ಬೇರ್ಪಡಿಸುವ ಕುರಿತು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ವಿನಯರು “ನಮ್ಮ ಮೂವರು ಪೌರ ಕಾರ್ಮಿಕರು ಕ್ವಾರಂಟೈನ್ ನಲ್ಲಿರುವುದರಿಂದ ಸಿಬ್ಬಂದಿಗಳ ಕೊರತೆ ಇದೆ. ಅದನ್ನು ನೀಗಿಸಲು ನಾವೇ ವಾಹನ ಚಾಲನೆ ಮಾಡುತ್ತಿದ್ದೇವೆ. ಜತೆಗೆ ಕಸವನ್ನು ಮೂಲದಿಂದಲೇ ಬೇರ್ಪಡಿಸುವ ಕುರಿತು ಜಾಗೃತಿ ನಡೆಸುತ್ತಿದ್ದೇವೆ. ಮತ್ತು ಪ್ಲಾಸ್ಟಿಕ್ ನ್ನು ಪ್ರತೀ ದಿನ ನೀಡದೆ ನಿಗದಿತ ದಿನದಲ್ಲೇ ನೀಡುವ ಕುರಿತು ಕಸ ನೀಡುವವರಿಗೆ ತಿಳಿಸುತ್ತಿದ್ದೇವೆ ಎಂದು ಹೇಳಿದರು.