ಬಂಟ್ವಾಳ: ಬಂಟ್ವಾಳ ತಾಲೂಕಿನ ರಕ್ಷಿತಾರಣ್ಯವೊಂದರಿಂದ ಲಕ್ಷಾಂತರ ರೂಪಾಯಿಯ ಗಂಧದ ಮರಗಳನ್ನು ಕಳವುಗೈದು ಅದನ್ನು ಮಾರಾಟಕ್ಕೆ ಯತ್ನಿಸಿದ ಆರೋಪಿಗಳ ಪೈಕಿ ಇಬ್ಬರನ್ನು ಬಂಟ್ಚಾಳ ವಲಯ ಆರಣ್ಯಾಧಿಕಾರಿಗಳು ಜೂ 25 ರಂದು ಬಂಧಿಸಿದ್ದಾರೆ.
ಕಾರ್ಯಚರಣೆ ಸಂದರ್ಭ ಆರೋಪಿಗಳ ಬಳಿಯಿಂದ ಉಡ ಎಂಬ ಕಾಡು ಪ್ರಾಣಿಯನ್ನು ರಕ್ಷಿಸಲಾಗಿದೆ. ಹಾಗೂ ಆರಣ್ಯಾಧಿಕಾರಿಗಳ ಕಾರ್ಯಚರಣೆ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗುವ ಮೂಲಕ ತಪ್ಪಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ವೀರಕಂಭ ರಕ್ಷಿತಾರಣ್ಯದಿಂದ ಗಂಧದ ಮರಗಳನ್ನು ಕಡಿಯಲಾಗಿದೆ. ಪಾತೂರು ನಿವಾಸಿ ಇಬ್ರಾಹಿಂ, ಹಾಗೂ ಇರಾ ಗ್ರಾಮದ ಮೊಯಿದ್ದೀನ್ ಬಂಧಿತ ಆರೋಪಿಗಳು ಸಿದ್ದೀಕ್ ಹಾಗೂ ಸಿದ್ದೀಕ್ ಯಾನೆ ಕೊರಂಗು ಸಿದ್ದೀಕ್ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.ಆರೋಪಿಗಳ ಬಳಿಯಿಂದ ಅಂದಾಜು ಮೂರು ಲಕ್ಷ ಮೌಲ್ಯದ ಗಂಧದ ಮರದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವೀರಕಂಭದ ರಕ್ಷಿತಾರಣ್ಯದಿಂದ ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಗಂಧದ ಮರಗಳನ್ನು ಕಡಿದು ತುಂಡು ಮಾಡಿ ಮಾರಟ ಮಾಡಲು ಆರೋಪಿಗಳು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಸಂದರ್ಭ ಆರೋಪಿಗಳು ಕಾಡು ಪ್ರಾಣಿಯಾದ ಉಡವೊಂದನ್ನು ಹಿಡಿದು ಪದಾರ್ಥ ಮಾಡಲು ತಯಾರಿ ನಡೆಸುತ್ತಿದ್ದು, ಆ ಪ್ರಾಣಿಯನ್ನು ಕೂಡ ರಕ್ಷಣೆ ಮಾಡಲಾಗಿದೆ ಎಂಬ ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಯಶೋಧರ, ಪ್ರೀತಮ್ ಎಸ್, ಬಸಪ್ಪ ಹಲಗಾರ್, ಅರಣ್ಯ ರಕ್ಷಕರಾದ ಜಿತೇಶ್, ಶೋಭಿತ್, ದಯಾನಂದ, ರವಿ, ರೇಖಾ, ಅರಣ್ಯ ವೀಕ್ಷಕರಾದ ಪ್ರವೀಣ್, ಚಾಲಕರಾದ ಜಯರಾಮ್ ಪಾಲ್ಗೊಂಡಿದ್ದರು.