ಉಪ್ಪಿನಂಗಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಸೋಣಂದೂರು ಪ್ರದೇಶದಲ್ಲಿ 44 ವರ್ಷದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 57/2026ರಡಿ ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿಯನ್ನು ಜಗದೀಶ ಎಸ್.ಎಸ್ (44) ಎಂದು ಗುರುತಿಸಲಾಗಿದೆ. ಇವರು ಸೋಮಶೇಖರ ಎಸ್.ಕೆ (69) ಅವರ ಪುತ್ರರಾಗಿದ್ದು, ಸೋಣಂದೂರು ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಪೊಲೀಸ್ ಮಾಹಿತಿ ಪ್ರಕಾರ, ಜಗದೀಶ ಅವರು ಗಾರೆ ಕೆಲಸ ಮಾಡಿಕೊಂಡಿದ್ದು, ಅವರ ಪತ್ನಿ ಮತ್ತು ಮಕ್ಕಳು ಹಾಸನದಲ್ಲಿ ವಾಸಿಸುತ್ತಿದ್ದಾರೆ. ಅವರು ದಿನನಿತ್ಯ ಊಟ ಮತ್ತು ಚಹಾವನ್ನು ತಂದೆಯ ಮನೆಯಲ್ಲಿ ಸೇವಿಸುತ್ತಿದ್ದರು. ಏಪ್ರಿಲ್ 6ರಂದು ಬೆಳಗ್ಗೆ 9.00 ಗಂಟೆಯವರೆಗೆ ತಮ್ಮ ಮನೆಯಲ್ಲಿ ಇದ್ದ ಅವರು, ನಂತರ 10.30 ಗಂಟೆಯಾದರೂ ಚಹಾಕ್ಕೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರು ಮನೆಯಲ್ಲಿ ಇಲ್ಲದೇ ಇದ್ದುದು ಗಮನಕ್ಕೆ ಬಂದಿದೆ.
ಆಶ್ಚರ್ಯದ ವಿಷಯವೆಂದರೆ, ಜಗದೀಶ ಅವರು ತಮ್ಮ ಮೊಬೈಲ್ ಫೋನ್ ಮತ್ತು ಬೈಕ್ ಅನ್ನು ಮನೆಯಲ್ಲಿ ಬಿಟ್ಟು ತೆರಳಿದ್ದಾರೆ. ಮೊದಲಿಗೆ ಅವರು ಕೆಲಸಕ್ಕೆ ಹೋಗಿರಬಹುದು ಎಂದು ಕುಟುಂಬದವರು ಭಾವಿಸಿದ್ದರು. ಆದರೆ ಮರುದಿನವೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಜಗದೀಶ ಅವರು ಈ ಹಿಂದೆ ಕೂಡ 2-3 ಬಾರಿ ಮನೆ ಬಿಟ್ಟು ಹೋಗಿ ನಂತರ ವಾಪಸ್ಸಾಗಿದ್ದ ಹಿನ್ನೆಲೆ, ಈ ಬಾರಿ ಕೂಡ ಮರಳಿ ಬರುತ್ತಾರೆ ಎಂಬ ನಿರೀಕ್ಷೆಯಿಂದ ದೂರು ನೀಡಲು ತಡವಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.


























