ಸುಳ್ಯ: ಸಾಮಾನ್ಯವಾಗಿ ಮದುವೆಗಳಿಗೆ ಕಲ್ಯಾಣ ಮಂಟಪ, ರೆಸಾರ್ಟ್ ಅಥವಾ ದೇವಸ್ಥಾನಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಸುಳ್ಯ–ಪುತ್ತೂರು ಜೋಡಿಯೊಂದು ಶಿವ–ಪಾರ್ವತಿಯರ ವಿವಾಹ ಸ್ಥಳವೆಂದು ಪ್ರಸಿದ್ಧಿಯಾದ ಉತ್ತರಾಖಂಡದ ತ್ರಿಯುಗಿನಾರಾಯಣ ದೇವಾಲಯವನ್ನೇ ತಮ್ಮ ಸಪ್ತಪದಿಗೆ ಆಯ್ಕೆ ಮಾಡಿಕೊಂಡು ವಿಶೇಷತೆ ಮೆರೆದಿದೆ.
ಜೋಡಿ ವಿವಾಹ
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಕಲ್ಲು ನಿವಾಸಿ ಗೀತಾತೀರ್ಥ ಕುಮಾರ್ ಹಾಗೂ ತೀರ್ಥ ಕುಮಾರ್ ಅವರ ಪುತ್ರ ಮೌನಿಶ್ ಕೆ.ಟಿ ಅವರ ವಿವಾಹವು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮರೀಲ್–ಕಾಡುಮನೆ “ಅಕ್ಷಯನಿಧಿ” ನಿವಾಸಿ ಶ್ರೀಮತಿ ಜಯಲೋಕನಾಥ್ ಹಾಗೂ ನಿವೃತ್ತ ಎಸ್.ಐ ಲೋಕನಾಥ ಗೌಡ ಅವರ ಪುತ್ರಿ ಅಕ್ಷಯಾ ಕೆ.ಎಲ್ ಅವರೊಂದಿಗೆ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯ ತ್ರಿಯುಗಿನಾರಾಯಣ ದೇವಸ್ಥಾನದಲ್ಲಿ ಮೇ 6ರಂದು ನೆರವೇರಿತು. ನಿವೃತ್ತ ಎ.ಎಸ್.ಐ ಕುದ್ವ ಲೋಕನಾಥ ಗೌಡ ಅವರು ಮೂಲತಃ ಸುಳ್ಯ ತಾಲೂಕಿನ ಪಂಜ ಹೋಬಳಿಯ ಕೂತ್ಕುಂಜ ಗ್ರಾಮದ ಕುದ್ವ ನಿವಾಸಿಯಾಗಿದ್ದಾರೆ.
ಪೌರಾಣಿಕ ಮಹತ್ವ
ಹಿಮಾಲಯ ಪರ್ವತ ಶ್ರೇಣಿಯ ಮಡಿಲಿನಲ್ಲಿ ನೆಲೆಗೊಂಡಿರುವ ತ್ರಿಯುಗಿನಾರಾಯಣ ದೇವಸ್ಥಾನವು ಶಿವ–ಪಾರ್ವತಿಯರ ವಿವಾಹ ಸ್ಥಳವೆಂಬ ಪೌರಾಣಿಕ ಮಹತ್ವ ಹೊಂದಿದೆ. “ತ್ರಿಯುಗಿನಾರಾಯಣ” ಎಂಬ ಹೆಸರಿನ ಅರ್ಥವೇ ಮೂರು ಯುಗಗಳ ಸಾಕ್ಷಿಯಾದ ನಾರಾಯಣ ಎನ್ನುವುದಾಗಿದೆ. ಈ ದೇವಾಲಯದ ವಿಶೇಷತೆ ಎಂದರೆ ಇಲ್ಲಿ ಶಾಶ್ವತವಾಗಿ ಉರಿಯುತ್ತಿರುವ ಧೂನಿ. ಶಿವ–ಪಾರ್ವತಿ ವಿವಾಹದ ಸಂದರ್ಭ ಬೆಳಗಿಸಿದ ಅಗ್ನಿಯೇ ಇಂದಿಗೂ ಉರಿಯುತ್ತಿದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಪವಿತ್ರ ಕುಂಡಗಳು
ದೇವಾಲಯದ ಆವರಣದಲ್ಲಿ ರುದ್ರಕುಂಡ, ವಿಷ್ಣುಕುಂಡ, ಬ್ರಹ್ಮಕುಂಡ ಹಾಗೂ ಸರಸ್ವತಿ ಕುಂಡ ಎಂಬ ನಾಲ್ಕು ಪವಿತ್ರ ಕುಂಡಗಳಿದ್ದು, ಇವುಗಳಿಗೆ ಧಾರ್ಮಿಕ ಮಹತ್ವವೂ ಇದೆ. ಸ್ಥಳೀಯ ದಂತಕಥೆಯ ಪ್ರಕಾರ ಶಿವ–ಪಾರ್ವತಿ ವಿವಾಹಕ್ಕೆ ಬ್ರಹ್ಮನೇ ಪುರೋಹಿತರಾಗಿ ವಿಧಿವಿಧಾನ ನೆರವೇರಿಸಿದ್ದು, ವಿಷ್ಣುವು ವಧುವಿನ ಸಹೋದರನ ಕರ್ತವ್ಯ ನಿರ್ವಹಿಸಿದ್ದಾನೆ ಎಂಬ ನಂಬಿಕೆಯೂ ಇದೆ.
ಇಲ್ಲೇ ಮದುವೆ ಯಾಕೆ? ಮೌನಿಶ್ ಅವರು ಸಿವಿಲ್ ಎಂಜಿನಿಯರ್ ಮತ್ತು ಅಕ್ಷಯಾ ಎಂಎಸ್ಸಿ ಮುಗಿಸಿ ಕಂಪೆನಿ ಉದ್ಯೋಗಿಯಾಗಿದ್ದಾರೆ. ಮೌನಿಶ್ ಅವರು ಅಧ್ಯಾತ್ಮಿಕ ನಂಬಿಕೆಯವರಾಗಿದ್ದು ಭಾರತದ ಹೆಚ್ಚಿನ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ. ಹೀಗಾಗಿ ಅವರಿಗೆ ತ್ರಿಯುಗಿ ನಾರಾಯಣ ದೇವಸ್ಥಾನದ ಬಗ್ಗೆ ತಿಳಿದಿತ್ತು. ತಮ್ಮ ಆಸೆಯಂತೆ ಅಲ್ಲೇ ವಿವಾಹವಾಗಿದ್ದಾರೆ. ಇಂತಹ ಅಪರೂಪದ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನಡೆದ ವಿವಾಹವು ಕುಟುಂಬದವರಿಗೂ ಬಂಧುಮಿತ್ರರಿಗೂ ವಿಶಿಷ್ಟ ಅನುಭವ ನೀಡಿದೆ.



























