ಉಪ್ಪಿನಂಗಡಿ: ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ತಕರಾರು ಕತ್ತಿ ದಾಳಿಗೆ ತಿರುಗಿದ ಘಟನೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಿಂಡೋವು ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳು ದಾಖಲಾಗಿವೆ.
ಸುಳ್ಯ ಐವರ್ನಾಡು ನಿವಾಸಿ ಅಶೋಕ ಕೆ (44) ಅವರು ನೀಡಿದ ದೂರಿನ ಪ್ರಕಾರ, ಮೇ 12ರ ರಾತ್ರಿ ಅವರು ತಮ್ಮ ಪತ್ನಿಯ ಮನೆಯಾದ ಕಿಂಡೋವಿನಲ್ಲಿ ಪೊನ್ನಕ್ಕ, ಜಾನಕಿ ಹಾಗೂ ಮಾವ ಚೆನ್ನಪ್ಪ ಗೌಡರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಪತ್ನಿಯ ತಂಗಿಯ ಗಂಡನಾದ ರಾಜೇಶ ಎಂಬಾತ ಅಮಲು ಪದಾರ್ಥ ಸೇವಿಸಿ ಕತ್ತಿಯೊಂದಿಗೆ ಸ್ಥಳಕ್ಕೆ ಬಂದು ಕೌಟುಂಬಿಕ ವಿಚಾರದಲ್ಲಿ ಜಗಳ ಆರಂಭಿಸಿದ್ದಾನೆ ಎನ್ನಲಾಗಿದೆ.
ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಅಶೋಕ ಕೆ, ಪೊನ್ನಕ್ಕ ಹಾಗೂ ಜಾನಕಿಯವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 75/2026 ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 118(1), 352 ಹಾಗೂ 351(2)ರಡಿ ತನಿಖೆ ನಡೆಯುತ್ತಿದೆ.
ಇನ್ನೊಂದೆಡೆ, ರಾಜೇಶ ಅವರು ನೀಡಿದ ಪ್ರತಿದೂರಿನ ಮೇರೆಗೆ, ತಮ್ಮ ಮೇಲೆ ಅಶೋಕ ಹಾಗೂ ಮಾವ ಚೆನ್ನಪ್ಪ ಗೌಡರು ಕತ್ತಿಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 76/2026 ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 352, 109 ಜೊತೆಗೆ 3(5)ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



























