ಬೆಳ್ತಂಗಡಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 3ರಂದು ರಾತ್ರಿ ಅಕ್ರಮ ಜಾನುವಾರು ಸಾಗಾಟದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಮರ್ಥ ಆರ್. ಗಾಣಿಗೇರ ಹಾಗೂ ಸಿಬ್ಬಂದಿ ತಂಡವು ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದ ಮಂಜುಶ್ರೀ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿದರು.
ಈ ವೇಳೆ ತೋಟತ್ತಾಡಿ ನಿವಾಸಿ ಅನಿಲ್ ಪಿ (34) ಎಂಬಾತನು ಯಾವುದೇ ಪೂರ್ವಾನುಮತಿ ದಾಖಲೆಗಳಿಲ್ಲದೆ ಪಿಕ್ಅಪ್ ವಾಹನದಲ್ಲಿ ಒಂದು ಜಾನುವಾರನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ವಿಚಾರಣೆ ವೇಳೆ, ರಾಘವೇಂದ್ರ ಭಟ್ (45) ಅವರಿಂದ ಜಾನುವಾರನ್ನು ಖರೀದಿಸಿದ್ದು, ಮಾಂಸಕ್ಕಾಗಿ ತಾನು ತೋಟತ್ತಾಡಿಯ ತೋಮಸ್ (30) ಹಾಗೂ ಕಕ್ಕಿಂಜೆಯ ಕಬೀರ್ (28) ಅವರೊಂದಿಗೆ ಸೇರಿ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 9/2026ರಡಿ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ-2020ರ ಕಲಂ 5, 7 ಮತ್ತು 12ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


























