ಬೆಳ್ತಂಗಡಿ, ಜೂನ್ 4: ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಗಡಾಯಿಕಲ್ಲಿನಲ್ಲಿ ಕಾಲು ಉಳುಕಿ ಬಂಡೆಯ ಮೆಟ್ಟಿಲಿನ ಮಧ್ಯೆ ಸಿಲುಕಿದ್ದ ಯುವಕನನ್ನು ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಸೇರಿ ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಗುರುವಾರ ಬೆಳಗ್ಗೆ ಇಬ್ಬರು ಯುವಕರು ಹಾಗೂ ಇಬ್ಬರು ಮಹಿಳೆಯರು ಗಡಾಯಿಕಲ್ಲು ವೀಕ್ಷಣೆಗೆ ತೆರಳಿದ್ದರು. ಕಡಿದಾದ ಬಂಡೆಯ ಮೆಟ್ಟಿಲುಗಳನ್ನು ಹತ್ತಿ ಮೇಲೇರಿದ ಬಳಿಕ ಯುವಕರಲ್ಲಿ ಒಬ್ಬರ ಕಾಲು ಟ್ವಿಸ್ಟ್ ಆಗಿ ಉಳುಕಿದ್ದು, ತೀವ್ರ ನೋವಿನಿಂದ ಕೆಳಗಿಳಿಯಲು ಸಾಧ್ಯವಾಗದೆ ಮಧ್ಯದಲ್ಲೇ ಸಿಲುಕಿಕೊಂಡರು. ಬಳಿಕ ಜೊತೆಗಿದ್ದವರು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಳ್ತಂಗಡಿ ಪೊಲೀಸರು, ತುರ್ತು ಸ್ಪಂದನಾ ಘಟಕದ ಸಿಬ್ಬಂದಿ ಹಾಗೂ ಸ್ಥಳೀಯರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಮಳೆಯಿಂದಾಗಿ ಬಂಡೆಗಳು ಜಾರುವಂತಾಗಿದ್ದರಿಂದ ಹಾಗೂ ಕಲ್ಲಿನ ಮೆಟ್ಟಿಲುಗಳು ಕಡಿದಾಗಿದ್ದರಿಂದ ಗಾಯಾಳುವನ್ನು ಸ್ಟ್ರೆಚರ್ನಲ್ಲಿ ಕೆಳಗೆ ತರುವುದು ಕಷ್ಟಕರವಾಗಿತ್ತು.
ಎಲ್ಲ ಸವಾಲುಗಳನ್ನು ಎದುರಿಸಿ ಸುಮಾರು ಮೂರು ಗಂಟೆಗಳ ನಿರಂತರ ಪ್ರಯತ್ನದ ಬಳಿಕ ಯುವಕನನ್ನು ಸುರಕ್ಷಿತವಾಗಿ ಕೆಳಕ್ಕೆ ತರಲಾಯಿತು. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಯುವಕ ಅಪಾಯದಿಂದ ಪಾರಾಗಿದ್ದು, ಕಾಲಿಗೆ ಗಂಭೀರ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.


























