ತಮ್ಮ ಇಡೀ ಜೀವನವನ್ನು ಮೂವರು ಹೆಣ್ಣುಮಕ್ಕಳ ಬೆಳೆಸಲು ಮತ್ತು ಅವರಿಗೆ ಉತ್ತಮ ಶಿಕ್ಷಣ ನೀಡಲು ಮುಡಿಪಾಗಿಟ್ಟಿದ್ದ ವೃದ್ಧ ತಂದೆಯೊಬ್ಬರು ಹರ್ಯಾಣದ ಸೋನಿಪತ್ನ ವೃದ್ಧಾಶ್ರಮವೊಂದರಲ್ಲಿ ಕೊನೆಯುಸಿರೆಳೆದಿದ್ದು, ಅಂತಿಮ ದರ್ಶನಕ್ಕೂ ಬರಲಾಗದ ಪುತ್ರಿಯರು ವಿಡಿಯೋ ಕಾಲ್ ಮೂಲಕ ಅಂತ್ಯಸಂಸ್ಕಾರ ವೀಕ್ಷಿಸಿದ ಅಮಾನವೀಯ ಘಟನೆ ನಡೆದಿದೆ.
ಮೂಲತಃ ಮುಂಬೈನ ಜವಳಿ ಉದ್ಯಮಿ ಶಿವಚರಣ್ ರಾಮ್ ರತನ್ ಗುಪ್ತಾ ಅವರು ಕಳೆದ ಎರಡು ವರ್ಷಗಳಿಂದ ಈ ವೃದ್ಧಾಶ್ರಮದಲ್ಲಿ ನೆಲೆಸಿದ್ದರು. ಹಿಂದೆ ಅವರ ಪತ್ನಿ ಮೀನಾ ಕೂಡ ಇಲ್ಲೇ ಮೃತಪಟ್ಟಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗುಪ್ತಾ ಅವರು ಮಂಗಳವಾರ ಮುಂಜಾನೆ 3:30 ರ ಸುಮಾರಿಗೆ ನಿಧನರಾದರು.
ಮೃತರ ಮೂವರು ಪುತ್ರಿಯರಾದ ಅನಿತಾ ನೇಪಾಳದಲ್ಲಿ ಶಿಕ್ಷಕಿಯಾಗಿದ್ದರೆ, ನಿಶಾ ಉತ್ತರ ಪ್ರದೇಶದ ಅಜಂಘಡ್ನಲ್ಲಿದ್ದರೆ ಕಿರಿಯ ಮಗಳು ಪ್ರಿಯಾ ಮುಂಬೈನಲ್ಲಿ ನೆಲೆಸಿದ್ದಾರೆ.ಗುಪ್ತಾ ಅವರ ನಿಧನದ ಸುದ್ದಿ ತಿಳಿದರೂ ತಮಗೆ ಬರಲು ಸಮಯವಿಲ್ಲ ಎಂದು ಪುತ್ರಿಯರು ತಿಳಿಸಿದ ಕಾರಣ, ವೃದ್ಧಾಶ್ರಮದ ಆಡಳಿತ ಮಂಡಳಿ ಹಾಗೂ ಸ್ಥಳೀಯ ನಿವಾಸಿಗಳ ಸಹಾಯದಿಂದ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪುತ್ರಿಯರು ವಿಡಿಯೋ ಕಾಲ್ ಮೂಲಕವೇ ಕಾರ್ಯವನ್ನು ವೀಕ್ಷಿಸಿದರು. ನೇಪಾಳದಲ್ಲಿರುವ ಮಗಳು ಅನಿತಾ ಆನ್ಲೈನ್ ಮೂಲಕ 5,100 ರೂಪಾಯಿ ಕಳುಹಿಸಿ ತಂದೆಯ ಅಂತ್ಯಸಂಸ್ಕಾರವನ್ನು ಸರಿಯಾಗಿ ನೆರವೇರಿಸುವಂತೆ ಕೋರಿದ್ದರು.
ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಗುಪ್ತಾ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ 20 ದಿನಗಳ ಹಿಂದೆಯೇ ಪುತ್ರಿಯರಿಗೆ ತಿಳಿಸಲಾಗಿತ್ತು. ಆದರೂ ಅವರು ತಂದೆಯನ್ನು ನೋಡಲು ಬರಲಿಲ್ಲ. ಅಂತಿಮ ಸಂಸ್ಕಾರದ ವೇಳೆ ವಿಡಿಯೋ ಕರೆ ಮುಖಾಂತರ ಸಂಪರ್ಕದಲ್ಲಿದ್ದ ಮಗಳೊಬ್ಬಳು, ‘ಇನ್ನು ಎಷ್ಟು ಸಮಯ ಬೇಕಾಗುತ್ತದೆ? ನಾವು ಊಟ ಮಾಡಿ ಸ್ನಾನ ಮಾಡಬೇಕು’ ಎಂದು ಹೇಳಿದ್ದರು ಎಂಬುದಾಗಿ ಬೇಸರ ಹೊರಹಾಕಿದರು.
ತಮ್ಮ ಮಗಳಂದಿರ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದ್ದ ಗುಪ್ತಾ, ಅವರ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಿದ್ದರು. ಅವರ ಪೈಕಿ ಇಬ್ಬರು ಶಿಕ್ಷಕಿಯರಾಗಿದ್ದಾರೆ. ಅಂತ್ಯಸಂಸ್ಕಾರದ ನಂತರ ಅಸ್ಥಿ ವಿಸರ್ಜನೆಗೂ ಬರಲು ಸಾಧ್ಯವಿಲ್ಲವೆಂದು ತಿಳಿಸಿದ ಕುಟುಂಬಸ್ಥರು, ಗಂಗಾನದಿಯಲ್ಲಿ ವಿಸರ್ಜಿಸುವಂತೆ ಆಡಳಿತ ಮಂಡಳಿಗೆ ವಿನಂತಿಸಿದ್ದಾರೆ.
ಕುಟುಂಬದ ಇಚ್ಛೆಯಂತೆ ಮರಣೋತ್ತರವಾಗಿ ಶಿವಚರಣ್ ಅವರ ನೇತ್ರಗಳನ್ನು ದಾನ ಮಾಡಲಾಗಿದ್ದು ಇಬ್ಬರಿಗೆ ಬೆಳಕಾಗಿದ್ದಾರೆ.




























