ಪುತ್ತೂರು: ಭಟ್ ಬಯೋಟೆಕ್ ಇಂಡಿಯಾ, ನವಚೇತನ್ ರಿಟಾಯರ್ಡ್ಮೆಂಟ್ ಟೌನ್ ಶಿಪ್ ಮತ್ತು ಫಾಪನ್ ಬಯೋಟೆಕ್ ಚೈನಾದ ವತಿಯಿಂದ ಡಾ. ಶ್ಯಾಮ್ ಭಟ್ ಅವರು ಪುತ್ತೂರು ತಾಲೂಕು ಸರಕಾರಿ ಅಸ್ಪತ್ರೆಗೆ ತಲಾ ರೂ. ೫೫ಸಾವಿರ ಮೌಲ್ಯದ ೫ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಶಾಸಕ ಸಂಜೀವ ಮಠಂದೂರು ಅವರ ಮೂಲಕ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಜನರ ಸಹಭಾಗಿತ್ವದಿಂದ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವಾಸದ ಸೇವೆ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕೋವಿಡ್ ಬಂದಾಗ ಜನರಿಗೆ ಆಸ್ಪತ್ರೆಯಲ್ಲಿ ಸರಕಾರಿ ಆಸ್ಪತ್ರೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಕೊಡುವ ಕೆಲಸ ಆಗುತ್ತಿದೆ. ದಾನಿಗಳ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಉತ್ತಮ ವಿಶ್ವಾಸದ ಸೇವೆಗೆ ಆಸ್ಪತ್ರೆ ಇವತ್ತು ಬದ್ದವಾಗಿದೆ. ಇದರ ಜೊತೆಗೆ ಡಾ. ಶ್ಯಾಮ್ ಭಟ್ ಅವರಿಂದ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆಯು ಆಸ್ಪತ್ರೆಗೆ ಪ್ರಾಣ ಕೊಡುವ ಸಂಗತಿ ಆಗಿದೆ ಎಂದರು. ಎಲ್ಲಾ ಹಂತದಲ್ಲಿ ಎಲ್ಲವನ್ನು ಸರಕಾರ ಮಾಡಲು ಆಗುವುದಿಲ್ಲ. ಜನರ ಸಹಭಾಗಿತ್ವದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತದೆ ಎಂದರು. ಸರಕಾರಿ ಆಸ್ಪತ್ರೆಯ ಡಾ. ಜಯದೀಪ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಆಕ್ಸಿಜನ್ ಕಾನ್ಸೆಂಟ್ರೇಟರ್ ಮತ್ತು ೨ಸಾವಿರ ಬಿಟಿಎಮ್ ಅನ್ನು ಆಸ್ಪತ್ರೆಯ ಪರವಾಗಿ ಪಡೆದು ಪಡೆದು ಇದರ ರೋಗಿಗಳಿಗೆ ಇದರ ಸದುಪಯೋಗ ನೀಡಲಾಗುವುದು ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ. ಕೃಷ್ಣಪ್ರಸನ್ನ, ರಫೀಕ್ ದರ್ಬೆ, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ತವರು ಜಿಲ್ಲೆಯ ಜನತೆಗೆ ನೆರವಾಗಬೇಕೆಂಬ ತುಡಿತ:-
ಕೋವಿಡ್ ಸಂದರ್ಭದಲ್ಲಿ ಸೋಂಕಿತರ ಪರೀಕ್ಷೆಗಾಗಿ ಆರ್ಟಿಪಿಸಿಆರ್ ಟೆಸ್ಟ್ ಕಿಟ್ಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒದಗಿಸಿದ್ದು, ಕೋವಿಡ್ ಆಂಟಿಜೆನ್ ರ್ಯಾಪಿಡ್ ಟೆಸ್ಟ್ ಕಿಟ್, ಕೋವಿಡ್ ಅಂಟಿಜನ್ ಎಲಿಸಾ ಟೆಸ್ಟ್ ಕಿಟ್, ಕೋವಿಡ್ ಆಂಟಿಬಡಿ ರ್ಯಾಪಿಡ್ ಟೆಸ್ಟಕಿಟ್ಗಳನ್ನು ಒದಗಿಸಲಾಗಿದ್ದು, ಇವುಗಳಿಗಾಗಿ ಐಸಿಎಂಆರ್ನಿಂದ ಮೊದಲು ಅಂಗೀಕಾರ ಪಡೆದ ಸಂಸ್ಥೆಗಳಲ್ಲಿ ನಮ್ಮ ಸಂಸ್ಥೆ ಒಂದಾಗಿದೆ. ಪುತ್ತೂರಿನಲ್ಲಿ ನವಚೇತನ ಹೆಸರಿನಲ್ಲಿ ಶಾಂತಿಗೋಡಿನಲ್ಲಿ ಬಡವಾಣೆಯೊಂದನ್ನು ನಿರ್ಮಿಸಿ ಹಿರಿಯರಿಗೆ ಆಸರೆಯಿಲ್ಲದವರಿಗೆ ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸಿದ್ದೆವೆ. ಈ ನಡುವೆ ಕೋವಿಡ್ ಸಂದರ್ಭದಲ್ಲಿ ೨ನೇ ಅಲೆಯ ಬಳಿಕ ೩ನೇ ಅಲೆ ಬರುವಾಗ ಆರೋಗ್ಯದ ಸುರಕ್ಷತೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಜನರಿಗೆ ನೆರವು ನೀಡಬೇಕೆಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ೬ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆಯಾಗಿ ನೀಡಿದ್ದೇವೆ – ಡಾ. ಶ್ಯಾಮ್ ಭಟ್