ಪುತ್ತೂರು: ನಸುಕಿನ ಜಾವ 60 ಅಡಿ ಆಳದ ಬಾವಿಗೆ ಬಿದ್ದ ಮಹಿಳೆಯೊಬ್ಬರನ್ನು ಮತ್ತು ಮಹಿಳೆಯ ರಕ್ಷಣೆಗೆ ಬಾವಿಗೆ ಇಳಿದ ಆಕೆಯ ಪತಿಯನ್ನೂ ಪುತ್ತೂರು ಅಗ್ನಿಶಾಮಕದಳದ ಠಾಣಾಧಿಕಾರಿ ವಿ. ಸುಂದರ್ ಅವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ರುಕ್ಮಯ್ಯ ಗೌಡ ಅವರು ಬಾವಿಗೆ ಇಳಿದು ರಕ್ಷಣೆ ಮಾಡಿದ ಘಟನೆ ಆ.30ರಂದು ಕೆಯ್ಯೂರುನಲ್ಲಿ ನಡೆದಿದೆ.
ಕೆಯ್ಯೂರುನಲ್ಲಿ ನಸುಕಿನ ಜಾವ ಮಹಿಳೆಯೊಬ್ಬರು ನೀರಿಗಾಗಿ ಬಾವಿ ಕಡೆ ಹೋದಾಗ ಆಕಸ್ಮಿಕವಾಗಿ ಬಿದ್ದಿದ್ದರು. ಮಾಹಿತಿ ಅರಿತ ಆಕೆಯ ಪತಿ ಪತ್ನಿಯ ರಕ್ಷಣೆಗಾಗಿ ಬಾವಿಗೆ ಇಳಿದು ಪತ್ನಿಯನ್ನು ನೀರಿನಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾದರೂ ಮೇಲೆತ್ತಲು ಅಸಾಧ್ಯವಾಗಿ ಬಾವಿಯಲ್ಲಿದ್ದ ಕಲ್ಲು ಹಿಡಿದು ನಿಂತಿದ್ದರು.
ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ವಿ ಸುಂದರ್ ಅವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ರುಕ್ಮಯ್ಯ ಗೌಡ ಅವರು 60 ಅಡಿ ಆಳದ ಬಾವಿಗೆ ಇಳಿದು ಬಾವಿಗೆ ಬಿದ್ದ ಸುನಂದ ಮತ್ತು ಅವರ ರಕ್ಷಣೆಗೆ ಬಾವಿಗೆ ಇಳಿದು ಸುಸ್ತಾಗಿ ಬಾಕಿಯಾದ ಆಕೆಯ ಪತಿಯನ್ನೂ ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕದಳದ ಮಂಜುನಾಥ್, ಚಾಲಕ ಮೋಹನ್ ಜಾದವ್, ಗೃಹರಕ್ಷಕದಳದ ಚಂದ್ರ ಕುಮಾರ್ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.