ಪುತ್ತೂರು: ಪಟ್ಟಣದಿಂದ ಎಪಿಎಂಸಿ ಗೆ ಸಂಪರ್ಕಿಸುವ ರಸ್ತೆಯು ಗುಂಡಿಗಳಿಂದ ತುಂಬಿದ್ದು ಆದರ್ಶ ಆಸ್ಪತ್ರೆಯ ಬಳಿ ಸ್ಥಳೀಯರೇ ಸಿಮೆಂಟ್ ಹಾಕಿ ಅದನ್ನು ರಕ್ಷಿಸಲು ಗಿಡದ ಚಟ್ಟಿಯನ್ನೂ ಇಟ್ಟಿದ್ದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು, ಅದೇ ರೀತಿ ಸ್ಥಳೀಯ ಆಟೋ ಚಾಲಕರು ಇಂದು ಅಲ್ಲೇ ಪಕ್ಕದಲ್ಲಿ ಇರುವ ಗುಂಡಿಗಳಿಗೆ ಸಿಮೆಂಟ್, ಮರಳನ್ನು ತಂದು ಹಾಕಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಪ್ರಯತ್ನವನ್ನು ಮಾಡಿದ್ದಾರೆ. ಅಧಿಕಾರಿಗಳ ಬಳಿ ಈ ರಸ್ತೆ ದುರಸ್ಥಿಗೊಳಿಸುವ ಬಗ್ಗೆ ಮನವಿ ನೀಡಿದರು ಯಾವುದೇ ಪ್ರಯೋಜನವಿಲ್ಲದ ಕಾರಣ ಸಾರ್ವಜನಿಕರೇ ದುರಸ್ಥಿಗೆ ಮುಂದಾಗಿದ್ದು, ಈ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಬಿ ಎಂ ಎಸ್ ಆಟೋ ರಿಕ್ಷಾ ಚಾಲಕರ-ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಭಾಸ್ಕರ, ಲಿಂಗಪ್ಪ ಗೌಡ, ಶ್ರೀಧರ, ಬಾಲಕೃಷ್ಣ ಪೂಜಾರಿ, ಮೋನಪ್ಪ ಗೌಡ, ಸೀತಾರಾಮ, ರಮೇಶ್ ಗೌಡ, ಬಾಲಕೃಷ್ಣ ಸಂಪ್ಯ , ವಾಲ್ಟರ್ ರೆಬೆಲ್ಲೋ, ಪ್ರಮೋದ್ ವೀರ ಮಂಗಿಲ,ಕೆ.ಟಿ. ಗಣೇಶ ರವರು ತಮ್ಮ ಸ್ವಂತ ಹಣದಿಂದ ಸಿಮೆಂಟ್, ಮರಳನ್ನು ತಂದು ರಸ್ತೆ ಗುಂಡಿಗಳನ್ನು ಮುಚ್ಚಿದರು.
ಪುತ್ತೂರು ಪೇಟೆಯಿಂದ ಎಪಿಎಂಸಿ ಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು ರಸ್ತೆಯ ತುಂಬೆಲ್ಲ ಗುಂಡಿಗಳು ಮೂಡಿದ್ದು ವಾಹನ ಸವಾರರು ಹರ ಸಾಹಸ ಪಡುವಂತಾಗಿದೆ. ಮಳೆ ಬಂದಾಗ ಗುಂಡಿಯ ಮೇಲೆ ನೀರು ನಿಂತು ರಸ್ತೆಯ ಮೇಲಿರುವ ಗುಂಡಿ ನೀರಿನಿಂದ ಮುಚ್ಚಿ ಹೋಗುವುದರಿಂದ ವಾಹನ ಸವಾರರಿಗೆ ರಸ್ತೆಯು ಪ್ರಯಾಣಕ್ಕೆ ಕಷ್ಟಕರವಾಗಿ ಪರಿಣಮಿಸುತ್ತಿದೆ. ಕೆಲವು ವಾಹನ ಸವಾರರು ಗುಂಡಿ ಹೊಂಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರಸ್ತೆ ಅಪಘಾತಗಳು ಸಂಭವಿಸುವ ಸನ್ನಿವೇಶಗಳು ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಪಿಎಂಸಿ ಬಳಿ ಚರಂಡಿ ಕುಸಿದು ಒನ್ ವೇ..!!
ಎಪಿಎಂಸಿ ಗೇಟಿನ ತುಸು ದೂರದಲ್ಲೇ ರಸ್ತೆಯ ಬದಿಯ ಚರಂಡಿ ಕೆಲ ದಿನಗಳ ಹಿಂದೆ ಮಳೆಗೆ ಕುಸಿದಿದ್ದು, ರಸ್ತೆಯ ಅರ್ಧ ಭಾಗ ಮುಚ್ಚಲ್ಪಟ್ಟಿದೆ ಇದರಿಂದ ರಸ್ತೆ ಸಂಚಾರ ಬಹಳ ಕ್ಲಿಷ್ಟಕರ ಸ್ಥಿತಿಯಲ್ಲಿದೆ ಹಾಗೂ ಒಮ್ಮೆ ಒಂದೇ ಕಡೆಯಿಂದ ಮಾತ್ರ ವಾಹನ ಪಾಸ್ ಆಗುವಂತಹ ಸ್ಥಿತಿ ಉಂಟಾಗಿದೆ.
ಕೆಲ ದಿನಗಳ ಹಿಂದೆ ನಗರ ಸಭೆ ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದಿನಂಪ್ರತಿ ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಟ ನಡೆಸುತ್ತಿದ್ದು, ಪುತ್ತೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಇದೂ ಒಂದಾಗಿದ್ದು ವಾಹನಗಳು ಸರಿಯಾದ ರಸ್ತೆಯ ಕೊರತೆಯಿಂದ ವಾಹನ ಸಂಚಾರದಲ್ಲಿ ಅಸ್ತವ್ಯಸ್ಥಗೊಂಡು ಪ್ರಯಾಣಿಕರು ಕಷ್ಟ ಪಡುವಂತಾಗಿದೆ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮುಂದೆ ಉಂಟಾಗಬಹುದಾದ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.