ಪುತ್ತೂರು: ತಾಲೂಕಿನಲ್ಲಿ ಕೆಲ ವರ್ಷಗಳ ಹಿಂದೆ ಮೆಸ್ಕಾಂ ಪವರ್ ಮ್ಯಾನ್ ಓರ್ವರು ವಿದ್ಯುತ್ ಶಾಕ್ ಗೆ ಬಲಿಯಾಗಲಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
4 ವರ್ಷದ ಹಿಂದೆ ಸರ್ವೆ ಗ್ರಾಮದ ಸೊರಕೆ ಸಮೀಪ ದುರಸ್ತಿಗೆಂದು ಕಂಬವೇರಿದ ಮೆಸ್ಕಾಂ ಪವರ್ ಮ್ಯಾನ್ ವಿದ್ಯುತ್ ಶಾಕ್ಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪವರ್ಮ್ಯಾನ್ ಮಾರ್ಗದಾಳು ಸಿದ್ದಯ್ಯ ಅವರಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
2017ರ ಮಾ.2ರಂದು ಸೊರಕೆ ಪರಂಟೋಲು ಬಳಿ ದುರಸ್ತಿಗಾಗಿ ವಿದ್ಯುತ್ ಕಂಬವೇರಿದ್ದ ಮೆಸ್ಕಾಂ ಜೂನಿಯರ್ ಪವರ್ಮ್ಯಾನ್, ಬಾಗಲಕೋಟೆ ಮೂಲದ ಶ್ರೀಶೈಲ ಗುರಪ್ಪ (29ವ.)ಅವರು ವಿದ್ಯುತ್ ಶಾಕ್ಗೊಳಗಾಗಿ ಕೆಳಕ್ಕೆ ಬಿದ್ದು ಸಾವಿಗೀಡಾಗಿದ್ದರು.
ಶ್ರೀಶೈಲ ಅವರು ಕಂಬವೇರಿ ಕೆಲಸ ಮಾಡುತ್ತಿರುವಾಗ ಅವರ ತಲೆಗೆ ಹೆಚ್ಟಿ ಲೈನಿನ ತಂತಿ ತಾಗಿದ್ದರಿಂದ ಘಟನೆ ಸಂಭವಿಸಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಮತ್ತು ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಶ್ರೀಶೈಲ ಅವರನ್ನು ಕಂಬಕ್ಕೆ ಹತ್ತಿಸಿ ಕೆಲಸ ಮಾಡಿಸಲಾಗುತ್ತಿತ್ತು ಎಂದು ಆರೋಪ ವ್ಯಕ್ತವಾಗಿತ್ತು.
ಪ್ರಕರಣದ ಕುರಿತು ಆಗಿನ ಸಂಪ್ಯ ಎಸ್.ಐ ಅಬ್ದುಲ್ ಖಾದರ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಜೊತೆಗೆ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಂತರ ಮೆಸ್ಕಾಂ ಇಲಾಖೆ ಸಿದ್ದಯ್ಯ ಅವರನ್ನು ಅಮಾನತು ಮಾಡಿತು.
ವಿಚಾರಣೆ ನಡೆಸಿದ ಎಡಿಷನಲ್ ಸಿವಿಲ್ ನ್ಯಾಯಾಧೀಶೆ ನಿರ್ಮಲದೇವಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. 9 ತಿಂಗಳು ಜೈಲು ಶಿಕ್ಷೆ, ತಲಾ ರೂ. 1000 ದಂಡ, ದಂಡ ತೆರಳು ತಪ್ಪಿದ್ದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕ ಚೇತನಾದೇವಿ ಪ್ರಾಸಿಕ್ಯೂಶನ್ ಪರ ವಾದಿಸಿದರು.