ಪುತ್ತೂರು: ಕೋವಿಡ್ -19 ನಿಂದ ಉಂಟಾಗಿದ್ದ ವಿಷಮ ಪರಿಸ್ಥಿತಿಯಲ್ಲಿ ಡಾ. ಶಿವರಾಮ ಕಾರಂತ ಬಾಲವನ ಸುಮಾರು ತಿಂಗಳಿನಿಂದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿತ್ತು. ಈಗ ಲಾಕ್ಡೌನ್ ತೆರವುಗೊಂಡ ನಂತರ ಮತ್ತೆ ಸಾರ್ವಜನಿಕ ಪ್ರವೇಶಾತಿಯನ್ನು ಆರಂಭಿಸುವ ನಿಟ್ಟಿನಲ್ಲಿ ಮತ್ತು ಶಿವರಾಮ ಕಾರಂತರ ಜನ್ಮದಿನದ ಪ್ರಯುಕ್ತ ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮದ ಸಲುವಾಗಿ ಬಾಲವನ ಸ್ವಚ್ಛತಾ ಕಾರ್ಯಕ್ರಮವು ಅ.06 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 52 ಸ್ವಯಂ ಸೇವಕರಿಂದ ನಡೆಯಿತು.
ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಬಾಲವನದಲ್ಲಿ ಶಿವರಾಮ ಕಾರಂತರು ಕಳೆದ ದಿನಗಳ ಪರಿಚಯವನ್ನು ನೀಡಿ ಅಲ್ಲಿನ ಮಹತ್ವವನ್ನು ತಿಳಿಸಿದರು.
ಬಾಲವನದ ಉಸ್ತುವಾರಿಗಳಾದ ಡಾ. ಸುಂದರ ಕೇನಾಜೆ ಇವರು ಮಾತನಾಡಿ ಹೊಸ ತಲೆಮಾರಿನ ಜನರು ಹಿಂದಿನ ಕಾಲದಿಂದಲೂ ಬಳುವಳಿಯಾಗಿ ಬಂದಿರುವ ಸಾರ್ವಜನಿಕ ಸ್ವತ್ತುಗಳನ್ನು ರಕ್ಷಿಸುವ ಹೊಣೆ ಹೊರಬೇಕು ಎಂದು ಹೇಳಿದರಲ್ಲದೆ ಸ್ವಯಂ ಸೇವಕರ ಕಾರ್ಯ ಚಟುವಟಿಕೆಗಳನ್ನು ಪ್ರಶಂಸಿದರು.
ಕಾಲೇಜಿನ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ದೀಕ್ಷಿತ್ ಕುಮಾರ್ ಮತ್ತು ಗ್ರಂಥಪಾಲಕರಾದ ರಾಮ ಕೆ ಇವರುಗಳು ಉಪಸ್ಥಿತರಿದ್ದು, ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರಲ್ಲದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.