ಪುತ್ತೂರಿನ ಖ್ಯಾತ ಚಿತ್ರ ಕಲಾವಿದ, ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಆಚಾರ್ಯ ರವರ ಕೈಚಳಕದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಲಾಂಛನ ಮೂಡಿ ಬಂದಿದೆ.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಡಳಿತ ಮಂಡಳಿಯು ನೂತನ ಲಾಂಛನವನ್ನು ಸಿದ್ಧಗೊಳಿಸಿದೆ. ರಜತ ವರ್ಣದ ಏಳು ಹೆಡೆಯ ನಾಗರಾಜ ಮತ್ತು ಷಣ್ಮುಖನನ್ನು, ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೋಲುವ ಏಳು ಹೆಡೆ ನಾಗರಾಜನ ನಡುವೆ ಷಣ್ಮುಖ ವಿರಾಜಮಾನನಾಗಿರುವ ರಜತ ವರ್ಣದ ಚಿತ್ರವು ಲಾಂಛನದ ಮದ್ಯ ಭಾಗವನ್ನು ಅಲಂಕರಿಸಿದೆ. ಶಿವಪ್ರಸಾದ್ ಆಚಾರ್ಯ ರವರು ವೃತಾಧಾರಿಯಾಗಿ ಈ ಲಾಂಛನವನ್ನು ಬಿಡಿಸಿದ್ದಾರೆ.ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಂಸದ ನಳೀನ್ ಕುಮಾರ್ ಕಟೀಲ್ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲಾಂಛನವನ್ನು ಅನಾವರಣಗೊಳಿಸಿದರು.
ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಆಚಾರ್ಯ ಪುತ್ತೂರು ರವರು ಈ ಲಾಂಛನವನ್ನು ವೃತಾಧಾರಿಯಾಗಿ 10 ದಿನ ವ್ಯಯಿಸಿ ಕೈಯಲ್ಲೇ ಬಿಡಿಸಿದ್ದಾರೆ. ತನ್ನ 5ನೇ ವರ್ಷದಲ್ಲಿ ಕೃಷ್ಣ ಜನ್ಮಾಷ್ಠಮಿಗೆ ಬಿಡಿಸಿದ ಕೃಷ್ಣನ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಆಗಿನ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಂದ ಪಡೆದ ಇವರು, ಇದೇ ಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನೂ ಗಳಿಸಿದ್ದರು. ತನ್ನ ಅಪ್ರತಿಮ ಚಿತ್ರ ಕಲಾ ಕೌಶಲ್ಯಕ್ಕಾಗಿ ಹಲವಾರು ರಾಷ್ಟ್ರೀಯ ಪ್ರಶಸ್ತಿ, ಜಪಾನಿನ ಮಿಟ್ಸುಭಾಷಿ ಮತ್ತು ಯುನೆಸ್ಕೋ ಗ್ರಾಂಡ್ ಪ್ರಿಕ್ಸ್ ಪುರಸ್ಕಾರ ಸೇರಿದಂತೆ 15 ರಾಷ್ಟ್ರೀಯ ಪುರಸ್ಕಾರ, 5 ಅಂತರಾಷ್ಟ್ರೀಯ ಪ್ರಶಸ್ತಿಯೊಂದಿಗೆ 250ಕ್ಕೂ ಅಧಿಕ ಪುರಸ್ಕಾರಗಳನ್ನು ಪಡೆದಿದ್ದಾರೆ. ಇಂತಹ ಅಪ್ರತಿಮ ಕಲಾವಿದ ಕುಕ್ಕೆ ಸುಬ್ರಹ್ಮಣ್ಯನ ಭಕ್ತನಾಗಿದ್ದು ಚಿತ್ರವನ್ನು ವೃತಾಧಾರಿಯಾಗಿಯೇ ಬಿಡಿಸಿದ್ದರು. ಅಲ್ಲದೆ ಅದರಲ್ಲಿನ ವ್ಯಾಖ್ಯೆಗಳ ಮತ್ತು ಹೊರಭಾಗದ ತಿದ್ದುಪಡಿಯ ಸಮಯದಲ್ಲೂ ವೃತವಿಲ್ಲದೆ ಚಿತ್ರವನ್ನು ಮುಟ್ಟುತ್ತಿರಲಿಲ್ಲ ಎನ್ನುವುದು ಇವರ ಭಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೋಲುವ ಏಳು ಹೆಡೆ ನಾಗರಾಜನ ನಡುವೆ ಷಣ್ಮುಖ ವಿರಾಜಮಾನನಾಗಿರುವ ರಜತ ವರ್ಣದ ಚಿತ್ರವು ಲಾಂಛನದ ಮಧ್ಯ ಭಾಗವನ್ನು ಅಲಂಕರಿಸಿದೆ. ಕೆಳ ಭಾಗದಲ್ಲಿ “ಅಜೇಯೋಯಂ ವಿಶ್ವಸ್ಯ” ಎಂಬ ವ್ಯಾಖ್ಯೆಯನ್ನು ಕೆತ್ತಲಾಗಿದೆ. ತಾರಕನ ಸಂಹಾರ ಮಾಡಿದ ದೇವಸೇನಾಪತಿಯು ಸೋಲನ್ನರಿಯದ ವಿಶ್ವದೊಡೆಯ ಮತ್ತು ವಿಶ್ವದಲ್ಲಿಯೇ ಜಯಿಸಲಾಗದ ಶಕ್ತಿ ಎಂಬ ಅರ್ಥವನ್ನು ಈ ವ್ಯಾಖ್ಯೆ ಪ್ರತಿಬಿಂಬಿಸುತ್ತದೆ.
ವ್ಯಾಖ್ಯೆಯ ಇಕ್ಕೆಲದಲ್ಲಿ ಷಣ್ಮುಖನ ವಾಹನವಾದ ನವಿಲಿನ ಗರಿಯನ್ನು ಚಿತ್ರೀಕರಿಸಲಾಗಿದೆ. ಅಲ್ಲದೆ ಲಾಂಛನದ ಸುತ್ತಲೂ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಎಂಬ ಕೆತ್ತನೆ ಇದೆ. ಮುಂದೆ ರಥಬೀದಿಯಲ್ಲಿ ನಿರ್ಮಿತವಾಗುವ ಪಾರಂಪರಿಕ ಕಲ್ಲಿನ ಕಟ್ಟಡದಲ್ಲಿ ಲಾಂಛನವನ್ನು ಕಲ್ಲಿನಿಂದ ಕೆತ್ತನೆ ಮಾಡಿ ಅನಾವರಣಗೊಳಿಸಲು ಆಡಳಿತ ಮಂಡಳಿಯು ಚಿಂತನೆ ನಡೆಸಿದೆ. ದೇವಳದ ವೆಬ್ಸೈಟ್ನಲ್ಲಿ ಇನ್ನು ಮುಂದೆ ಈ ಲಾಂಛನವು ಪ್ರಧಾನವಾಗಿ ಗೋಚರಿಸಲಿದೆ.