ಬೆಂಗಳೂರು: ಪುನೀತ್ ರಾಜ್ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ ಎಂದು ತಮಿಳು ನಟ ವಿಶಾಲ್ ಇಂದು (ಅಕ್ಟೋಬರ್ 31) ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷದಿಂದ 1800 ಮಕ್ಕಳ ಜವಾಬ್ದಾರಿ ನನ್ನದು ಎಂದು ಅವರು ತಿಳಿಸಿದ್ದಾರೆ. ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ಅಕ್ಟೋಬರ್ 29 ರಂದು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ತಾನು ಹೊರುವುದಾಗಿ ತಮಿಳು ನಟ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ 1800 ಮಕ್ಕಳನ್ನು ಓದಿಸುತ್ತಿದ್ದರು. ಇದೀಗ ಪುನೀತ್ ನಿರ್ವಹಿಸುತ್ತಿದ್ದ ಜವಾಬ್ದಾರಿ ಹೊರುವುದಾಗಿ ವಿಶಾಲ್ ಹೇಳಿಕೆ ನೀಡಿದ್ದಾರೆ. ಇನ್ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ಅವರು ಘೋಷಣೆ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಸದ್ದಿಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು ಎಂಬ ವಿಚಾರ ಅವರ ನಿಧನಾನಂತರ ಹೆಚ್ಚು ಹೆಚ್ಚು ಬಯಲಾಗುತ್ತಿದೆ. ಈ ಬಗ್ಗೆ ಪುನೀತ್ ಬಗ್ಗೆ ಅಭಿಮಾನದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಹೃದಯತುಂಬಿ ಶಹಬ್ಬಾಸ್ ವಿಶಾಲ್ ಎಂದರು ಕನ್ನಡಿಗರು:
ಈ ಮಧ್ಯೆ, ಭಾನುವಾರ ರಾತ್ರಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಾ ಮೂಲತಃ ಬೆಂಗಳೂರಿನವರಾದ, ತಮಿಳು ನಟ ವಿಶಾಲ್ ಅವರು ಅಪ್ಪು ಮೇಲಿನ ಅಭಿಮಾನದೊಂದಿಗೆ ತಾವು ತೆಗೆದುಕೊಂಡಿರುವ ನಿರ್ಣಯವನ್ನು ಅತ್ಯಂತ ವಿನಮ್ರವಾಗಿ ಪ್ರಕಟಿಸಿದ್ದಾರೆ.
ವಿಶಾಲ್ ಅವರ ಈ ಸಹೃದಯೀ ನಿರ್ಧಾರದ ಬಗ್ಗೆ ಕನ್ನಡಿಗರು ಅಭಿಮಾನದ ಹೊಳೆ ಹರಿಸಿದ್ದಾರೆ. ಹೃದಯತುಂಬಿ ಬಂದು ಶಹಬ್ಬಾಸ್ ವಿಶಾಲ್ ಎಂದು ಕನ್ನಡಿಗರು ಆತನನ್ನು ಹರಿಸಿದ್ದಾರೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ವಿಶಾಲ ಹೃದಯದ ನಟ ವಿಶಾಲ್ರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಿದ್ದಾರೆ. ವಿಶಾಲ್ ನಿಮ್ಮದು ಅದ್ಭುತ ಸ್ಪಂದನೆ ಎಂದಿರುವ ಕನ್ನಡಿಗರು, ಇದೇ ವೇಳೆ ಬೇರೆ ಯಾವೊಬ್ಬ ನಟ, ರಾಜಕಾರಣಿಗೂ ಇಂತಹ ಸದಾಲೋಚನೆ ಬರಲಿಲ್ಲವಲ್ಲಾ ಎಂದೂ ವ್ಯಥೆಪಟ್ಟಿದ್ದಾರೆ. ಈ ಬೆಳವಣಿಗೆಯ ಸಮ್ಮುಖದಲ್ಲಿ, ಕನ್ನಡ ಪ್ರೇಮಿ ವಿಶಾಲ್ ಬಗ್ಗೆ ಕನ್ನಡಿಗರು ಇನ್ನಷ್ಟು ಅಭಿಮಾನ ಹೆಚ್ಚಿಸಿಕೊಂಡಿದ್ದಾರೆ.