ಮಂಗಳೂರು: ನಗರ ಹೊರವಲಯದ ಗುರುಪುರ ಕೈಕಂಬದ ವಿಕಾಸ್ ನಗರದಲ್ಲಿ ಕಾರು ಪಲ್ಟಿಯಾಗಿ ಅದೃಷ್ಟವಶಾತ್ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ನಿನ್ನೆ ಮಧ್ಯರಾತ್ರಿ ಮೂಡಬಿದಿರೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ರಿಟ್ಝ್ ಕಾರು ವಿಕಾಸ್ ನಗರ ಬಳಿ ತಲುಪಿದಾಗ ರಸ್ತೆ ಮಧ್ಯೆ ಮಳೆ ನೀರು ನಿಂತಿದ್ದು, ಅದನ್ನು ತಪ್ಪಿಸಲು ಹೋಗಿ ಮಗುಚಿ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪಾರಾಗಿದ್ದು, ಸ್ಥಳೀಯರು ರಕ್ಷಿಸಿದ್ದಾರೆ. ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಇದೇ ಸ್ಥಳದಲ್ಲೇ ಈ ಹಿಂದೆ 2-3 ಅಪಘಾತಗಳು ಸಂಭವಿಸಿದ್ದು, ರಸ್ತೆಯಲ್ಲಿ ನೀರು ತುಂಬಿರುವ ಕಾರಣ ಗುಂಡಿ ಎಂದು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಈ ಬಗ್ಗೆ ಸಂಬಂಧಪಟ್ಟವರು ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.