ಬೆಳ್ತಂಗಡಿ, ಜು.16: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಪ್ರದೇಶದಲ್ಲಿದ್ದ ಖೋಟಾ ನೋಟು ಮುದ್ರಣ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ವಶಕ್ಕೆ ಪಡೆದು ವಿವಿಧ ಉಪಕರಣಗಳು ಹಾಗೂ ನಕಲಿ ಕರೆನ್ಸಿ ತಯಾರಿಕೆಗೆ ಬಳಸಲಾಗುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಜುಲೈ 16ರಂದು ಬೆಳಿಗ್ಗೆ ಸಿಬ್ಬಂದಿಗಳೊಂದಿಗೆ ಅಡೆಂಜದಲ್ಲಿರುವ ಕಟ್ಟಡದ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಭಾರತೀಯ ಖೋಟಾ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗುತ್ತಿತ್ತು ಎನ್ನಲಾಗಿದೆ.
ಆರೋಪಿಗಳ ವಿವರ: 1) ಇಬ್ರಾಹಿಂ (60) ಪುತ್ತೂರು ಕಸಬ ಗ್ರಾಮ, ದ ಕ ಜಿಲ್ಲೆ.
2) ಶರೀಪ (51) ಚಂಗುಲ ಗ್ರಾಮ, ಕಾಸರಗೋಡುಜಿಲ್ಲೆ.
3) ಸಂದೀಪ ಪುಂಡಲಿಕ ಶೋಳಂಬಿ (30), ಹಳಿಯಾಳ ತಾಲೂಕು ಉತ್ತರ ಕನ್ನನಡ ಜಿಲ್ಲೆ.
4) ಮಹಮ್ಮದ್ ನಬಾಸ್ (37), ಆಮೂರು ಗ್ರಾಮ, ಕಾಸರಗೊಡು ಜಿಲ್ಲೆ.
5) ಸಲ್ಮಾನ್ ಫಾರೀಸ್ (25) ಒಳಮೊಗ್ರು ಗ್ರಾಮ, ಪುತ್ತೂರು
6) ಸಿರಾಜುದ್ದೀನ್ (34), ಉರುವಾಲು ಗ್ರಾಮ, ಬೆಳ್ತಂಗಡಿ
7) ಇರ್ಷಾದ್ (31) ಪುತ್ತಿಲ ಗ್ರಾಮ, ಬೆಳ್ತಂಗಡಿ
ಸ್ಥಳದಿಂದ ₹500 ಮುಖಬೆಲೆಯ ಒಂದು ಖೋಟಾ ನೋಟು, ₹500 ಮುಖಬೆಲೆಯ ನೋಟುಗಳಂತೆ ಮುದ್ರಿಸಲಾದ 21 ಎ-4 ಗಾತ್ರದ ಹಾಳೆಗಳು, ಗಣಕಯಂತ್ರ, ಝೆರಾಕ್ಸ್ ಯಂತ್ರ, ವಿವಿಧ ಸೀಲುಗಳು ಸೇರಿದಂತೆ ಇತರೆ ಉಪಕರಣಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 178ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದು ಮಣಿ ಆರ್.ಎನ್., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿ ಯೋಗೀಶ್ ಬಿ. (HC-193), ನಿರಂಜನ್ ಎಂ.ಎನ್. (HC-190), ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ನಂದಕುಮಾರ್ ಹಾಗೂ ಎಎಸ್ಐ ದೀಪಕ್, ಹೆಚ್ಸಿ ಸತೀಶ್ ಮತ್ತು ಹೆಚ್ಸಿ ರೌಫ್ ಅವರುಗಳು ಉಪ್ಪಿನಂಗಡಿ ಪೊಲೀಸರೊಂದಿಗೆ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.


























