ಬೆಳ್ತಂಗಡಿ: ಕಿಡಿಗೇಡಿಗಳು ಭಗವಾಧ್ವಜಕಟ್ಟೆಗೆ ಹಾನಿಗೈದು ಕಂಬ ಹಾಗೂ ಭಗವಾಧ್ವಜವನ್ನು ನೆಲಕ್ಕುರುಳಿಸಿದ ಘಟನೆ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಜಂಕ್ಷನ್ ನಲ್ಲಿ ಎ.17ರ ರಾತ್ರಿ ಸಂಭವಿಸಿದೆ.
ಕೊಕ್ಕಡದಿಂದ ಪಟ್ರಮೆಗೆ ತೆರಳುವ ಮಾರ್ಗದಲ್ಲಿರುವ ಉಪ್ಪಾರಪಳಿಕೆ ಎಂಬಲ್ಲಿ ಸ್ಥಳಿಯ ಹಿಂದೂ ಯುವಕರು ಸೇರಿಕೊಂಡು ಭಗವಾಧ್ವಜವನ್ನು ಸ್ಥಾಪಿಸಿದ್ದರು. ಆದರೆ ನಿನ್ನೆ ರಾತ್ರಿ ಈ ಭಗವಾಧ್ವಜ ಹಾಗೂ ಅದರ ಕಂಬ ಬುಡ ಸಮೇತ ಮುರಿದು ರಸ್ತೆಗೆ ಬಿದ್ದಿತ್ತು. ಇದು ಉದ್ದೇಶ ಪೂರ್ವಕವಾಗಿಯೇ ಮಾಡಿರುವ ಕೆಲಸ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಘಟನೆ ಕುರಿತಂತೆ ಸ್ಥಳೀಯ ಶಾಸಕ ಹರೀಶ್ ಪೂಂಜಾ ರವರಿಗೆ ಮಾಹಿತಿ ನೀಡಿದ್ದು, ಈ ಕೃತ್ಯವನ್ನು ಖಂಡಿಸಿರುವ ಅವರು ಮತ್ತದೇ ಹಾಳುಗೆಡವಿದ ಜಾಗದಲ್ಲಿ ಭಗವಾಧ್ವಜವನ್ನು ಹಾರಾಡುವಂತೆ ಮಾಡುವುದಾಗಿ ಹೇಳಿದರು. ಅಲ್ಲದೆ ಇನ್ನು ಮುಂದೆ ಇಂತಹ ದುಷ್ಕೃತ್ಯ ಮರುಕಳಿಸಿದರೆ ಪರಿಣಾಮ ಬೇರೆ ರೀತಿಯೇ ಆಗಿರುತ್ತದೆ ಎಂದು ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡಿದರು ಎಂದು ತಿಳಿದು ಬಂದಿದೆ.