ಪುತ್ತೂರು: ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದ ಮತ್ತು ಬಂಧಿತ ಆರೋಪಿ ಕಳವು ಮಾಡಿದ್ದ ಮೊಬೈಲ್ ಫೋನ್ಗಳು ಮತ್ತು ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಸಂಟ್ಯಾರ್ ಬಳಿ ಎ.24ರ ರಾತ್ರಿ ನಡೆದಿದೆ.
ಕಾಸರಗೋಡು ತಾಲೂಕಿನ ಎಣ್ಮಕಜೆ ಗ್ರಾಮದ ಅಡ್ಕಸ್ಥಳ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಇರುವ ಉಮೈರ್ (24) ಬಂಧಿತ ಆರೋಪಿ.
ಈತ ಸೆಂಟ್ಯಾರ್ ಬಳಿ ಸ್ಕೂಟರ್ ಸಮೀಪ ನಿಂತುಕೊಂಡಿದ್ದು ಪೊಲೀಸರು ಬರುವುದನ್ನು ನೋಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತನ ವಿಚಾರಣೆ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆರಂಭದಲ್ಲಿ ತಾನು ವಿಟ್ಲದ ಮೊಹಮ್ಮದ್, ಉಪ್ಪಿನಂಗಡಿಯ ಆಸೀಫ್ ಎಂದು ಹೇಳಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಬಳಿಕ ಪೊಲಿಸರು ಕೂಲಂಕುಶವಾಗಿ ವಿಚಾರಿಸಿದಾಗ ಆತನ ಬಳಿ 5 ಮೊಬೈಲ್ ಫೋನ್ಗಳಿದ್ದು ಮತ್ತು ಆತನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ನ ದಾಖಲೆಯೂ ಇಲ್ಲದೇ ಇದ್ದುದರಿಂದ ವಿಚಾರಣೆ ತೀವ್ರಗೊಳಿಸಿದಾಗ ಪ್ರಕರಣ ಬಯಲಾಗಿದೆ.
ತಾನು ಕಾಸರಗೋಡು ನಿವಾಸಿಯಾಗಿದ್ದು, ಬೆಳ್ಳಾರೆ ಕಡೆಯಿಂದ ಕಳವು ಮಾಡಿ ಬಂದಿರುವುದಾಗಿ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು ಬಳಿಕ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನ ಬಳಿಯಿದ್ದ 5 ಮೊಬೈಲ್ ಫೋನ್ಗಳನ್ನು ಮತ್ತು ಸ್ಕೂಟರ್ನ್ನು ವಶಪಡಿಸಿಕೊಂಡಿದ್ದಾರೆ.