ಪುತ್ತೂರು: ವಿದ್ಯಾರ್ಥಿಗಳಲ್ಲಿ ಚಿಂತನಶೀಲತೆಯನ್ನು ಬೆಳೆಸಿ, ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಗೊಳಿಸುವಲ್ಲಿ ಯುರೇಕಾ ಶಿಬಿರದಿಂದ ಸಾಧ್ಯವಾಗುತ್ತದೆ. ಕ್ರಿಯಾಶೀಲತೆಯು ಬೆಳೆಯುವುದಕ್ಕೆ ಕಾರಣವಾಗುತ್ತದೆ. ಈ ಮೂಲಕ ಬದುಕಿಗೆ ಪೂರಕವಾದ ಶಿಕ್ಷಣ ದೊರೆತು ಮುಂದಿನ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ 12 ದಿನಗಳ ರಾಜ್ಯಮಟ್ಟದ ಯುರೇಕಾ ವಿಜ್ಞಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿಜ್ಞಾನದ ಕಲಿಕೆಯಲ್ಲಿ ಅನ್ವಯ ಮತ್ತು ಸಾಂಪ್ರಾದಾಯಿಕ ಪದ್ಧತಿಯ ಕಲಿಕೆಯನ್ನು ಅಳವಡಿಸಿಕೊಂಡರೆ ವಿಜ್ಞಾನದ ವಿಷಯವೂ ಕೂಡಾ ಆಸಕ್ತಿದಾಯಿಕವಾಗಿರಬಲ್ಲುದು. ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಕಲಿಕೆ ಸಾಧ್ಯವಾಗುತ್ತದೆ. ಇದರಿಂದ ಸೃಜನಾತ್ಮಕವಾಗಿ ಬೆಳೆಯಲು ಸಾಧ್ಯ.ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಶಿಬಿರಗಳು ತುಂಬಾ ಉಪಯುಕ್ತವಾಗಿರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಕೆ. ಎನ್. ಸುಬ್ರಹ್ಮಣ್ಯ ಮಾತನಾಡಿ ಶಿಬಿರದಲ್ಲಿ ಕಲಿತ ವಿಚಾರಗಳು ವಿದ್ಯಾರ್ಥಿಗಳ ದೈನಂದಿನ ಬದುಕಿನಲ್ಲಿ ಉಪಯೋಗವಾಗುವಂತಾಗಬೇಕು. ಈ ಮೂಲಕ ಶಿಕ್ಷಣವು ಬದುಕಿನ ಮೂಲಭೂತ ಪ್ರಶ್ನೆಗಳ ಅನ್ವೇಷಣೆಯ ತಾಣವಾಗಬೇಕು ಎಂದರು.
ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ನೂರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದ ಕುರಿತು ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಭೂಮಿಕಾ ಜಿ, ಕೃಷ್ಣಪ್ರಸಾದ್, ಪುಣಚದ ಶ್ರೀ ದೇವಿ ಪ್ರೌಢಶಾಲೆಯ ಈಶ ಕೃಷ್ಣ, ನೆಹರೂನಗರ ಸುದಾನ ಪ್ರೌಢಶಾಲೆಯ ಆದಿತ್ಯ ರಾಮ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆತ್ಮೀಯ ಎಂ. ,ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಹರ್ಷಿತಾ, ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯ ನಿಶ್ಮಾ , ಪ್ರಗತಿ ಪ್ರೌಢಶಾಲೆಯ ಪ್ರಧಾನ್ ಎಂ. ಎನ್, ವೇಣೂರು ಸರಕಾರಿ ಪ್ರೌಢಶಾಲೆಯ ಸಂಪದ ಕೆ. ಎಸ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು.

ಯುರೇಕಾ ಕಾರ್ಯಾಗಾರದ ಮುಖ್ಯ ಸಂಯೋಜಕ ಹರೀಶ ಶಾಸ್ತ್ರೀ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹನ್ನೆರಡು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳ ಬಗ್ಗೆ ವರದಿಯನ್ನು ಉಪನ್ಯಾಸಕಿ ಪಲ್ಲವಿ ಮಂಡಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಡಾ. ಶ್ರುತಿ ನಿರೂಪಿಸಿದರು. ಉಪನ್ಯಾಸಕಿ ಚೇತನಾ ಸ್ವಾಗತಿಸಿ ಶರ್ಮಿಳಾ ವಂದಿಸಿದರು.