ಮಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸಾನಿ ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ವಿವಿಧೆಡೆ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು ದಕ್ಷಿಣ ಕನ್ನಡ (ದ.ಕ) ಜಿಲ್ಲೆಯಲ್ಲಿ ಇನ್ನೆರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಬಹುತೇಕ ಕಡೆ ತುಂತುರು ಮಳೆಯಾಗಿದ್ದು, ಕೆಲವೆಡೆ ಕೆಲವೆಡೆ ಭಾರೀ ಮಳೆಯಾಗುತ್ತಿದೆ. ಬೇಸಿಗೆಯ ದಾಹದಿಂದ ಕಂಗಾಲಾಗಿದ್ದ ಜನ, ಮಳೆಯ ತಂಪಾದ ವಾತಾವರಣದಿಂದಾಗಿ ನಿರಾಳರಾಗಿದ್ದಾರೆ.
ಬಂಟ್ವಾಳದ ಕೆದಿಲದಲ್ಲಿ 65.5 ಮಿ.ಮೀ, ಇಡ್ಕಿದು 59.5, ಅನಂತಾಡಿ 49.5, ಇರಾ 48, ಸುಳ್ಯದ ಬಾಳಿಲದಲ್ಲಿ 45 ಮಿ.ಮೀ ಮಳೆಯಾಗಿದೆ. ಬಳ್ಪ, ಕಲ್ಲಡ್ಕ, ಮಂಚಿ, ನರಿಕೊಂಬು, ಅಡ್ಯಾರ್, ಹರೇಕಳ, ಬಲ್ನಾಡು ಭಾಗಗಳಲ್ಲೂ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ದಾಖಲಾದ ಗರಿಷ್ಠ ತಾಪಮಾನ 28.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 26.5 ಡಿ.ಸೆ. ಆಗಿದೆ.
ನಗರ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ತೀವ್ರತೆ ಮತ್ತು ಹೆಚ್ಚು ಸಮಯ ಮಳೆ ಸುರಿಯಿತು. ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆಯಲ್ಲಿ ಉತ್ತಮ ಮಳೆಯಾಗಿದೆ.