ಪುತ್ತೂರು: ರೈತರಿಗೆ ಮತ್ತು ವರ್ತಕ ಸಮುದಾಯಗಳೆರಡಕ್ಕೂ ಸ್ನೇಹಿಯಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಈಗ ರಾಜ್ಯದಲ್ಲಿ ನಿರ್ಮಾಣಗೊಂಡಿವೆ. ಪುತ್ತೂರು ಎಪಿಎಂಸಿಯ ಆಡಳಿತ ಕೂಡ ಸಾರ್ಥಕ ಐದು ವರ್ಷಗಳ ಸೇವೆಯಲ್ಲಿ ರೈತ ಮತ್ತು ವರ್ತಕ ಸಮುದಾಯಕ್ಕೆ ನ್ಯಾಯ ನೀಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ದಿನೇಶ್ ಮೆದು ಅಧ್ಯಕ್ಷತೆಯ ಪುತ್ತೂರು ಎಪಿಎಂಸಿಯ ಐದು ವರ್ಷಗಳ ಆಡಳಿತ ಮುಕ್ತಾಯಗೊಂಡಿದ್ದು, ಸೋಮವಾರ ನಡೆದ ಕೊನೆಯ ಸಾಮಾನ್ಯ ಸಭೆಯ ಅಂತ್ಯದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಕೃಷಿ ಕಾಯಿದೆ ಬಂದಾಗ ಎಪಿಎಂಸಿಗಳ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ರೈತರಿಗೆ ಆಗುತ್ತಿದ್ದ ವಂಚನೆಯನ್ನು ತಪ್ಪಿಸಲು ಹಿಂದೆ ಎಪಿಎಂಸಿಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ನಾಗರಿಕತೆ ಬೆಳೆದಂತೆ ರೈತರು ಸದೃಢರೂ, ಸುಶಿಕ್ಷಿತರೂ ಆದ ಪರಿಣಾಮ ಶೋಷಣೆ ಕಡಿಮೆಯಾಯಿತು. ಹೀಗಾಗಿ ಕೃಷಿ ಕಾಯಿದೆಯ ಮೂಲಕ ವರ್ತಕರ ಸೆಸ್ ಹೊರೆ ತಗ್ಗಿಸಲಾಯಿತು ಎಂದು ಹೇಳಿದ ಅವರು, ಪುತ್ತೂರು ಎಪಿಎಂಸಿಯಲ್ಲಿ ಈ ಬಾರಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಗೋದಾಮು ನಿರ್ಮಾಣ, ರೈತ ಭವನದ ಸೌಕರ್ಯ ಹೆಚ್ಚಳ, ಅತಿಥಿಗೃಹ ನವೀಕರಣ ನಡೆದಿದೆ. ಇದರ ಜತೆಗೆ ಬಹುಕಾಲದ ರೈಲ್ವೆ ಅಂಡರ್ಪಾಸ್ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದನ್ನು ಕಾರ್ಯಗತಗೊಳಿಸುವಲ್ಲಿ ಅಧ್ಯಕ್ಷ ದಿನೇಶ್ ಮೆದು ಅವರು ನಿರಂತರ ಶ್ರಮ ವಹಿಸಿದ್ದಾರೆ ಎಂದರು.
ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ನಮ್ಮ ಆಡಳಿತ ಅವಧಿಯಲ್ಲೇ ರೈಲ್ವೆ ಅಂಡರ್ಪಾಸ್ ಯೋಜನೆ ಪೂರ್ಣಗೊಳ್ಳಬೇಕೆಂಬ ಕನಸು ಕಂಡಿದ್ದೆವು. ಅದು ಸಾಧ್ಯವಾಗದಿದ್ದರೂ ಯೋಜನೆಗೆ ಶಿಲಾನ್ಯಾಸ ಮಾಡುವ ಅವಕಾಶ ಸಿಕ್ಕಿದೆ. ಬೂಡಿಯಾರ್ ರಾಧಾಕೃಷ್ಣ ರೈ ಮತ್ತು ಬಾಲಕೃಷ್ಣ ಬಾಣಜಾಲ್ ತಂಡ ಮೊದಲ ೨೦ ತಿಂಗಳು ಹಾಗೂ ನಂತರದ ೪೦ ತಿಂಗಳಲ್ಲಿ ನಾನು ಮತ್ತು ಮಂಜುನಾಥ ಎನ್.ಎಸ್. ಅವರ ತಂಡ ಕೆಲಸ ಮಾಡಿದೆ. ಸಹಕಾರ ನೀಡಿದ ಎಲ್ಲ ನಿರ್ದೇಶಕರು, ಸಿಬ್ಬಂದಿಗಳು ಸ್ತುತ್ಯರ್ಹರು ಎಂದರು.
ಉಪಾಧ್ಯಕ್ಷ ಎನ್.ಎಸ್. ಮಂಜುನಾಥ್, ನಿರ್ದೇಶಕರಾದ ಬೂಡಿಯಾರ್ ರಾಧಾಕೃಷ್ಣ ರೈ, ಬಾಲಕೃಷ್ಣ ಬಾಣಜಾಲ್, ತ್ರಿವೇಣಿ ಪೆರುವೋಡಿ, ಪುಲಸ್ತ್ಯಾ ರೈ, ಶಕೂರ್ ಹಾಜಿ, ತೀರ್ಥಾನಂದ ದುಗ್ಗಳ, ಮೇದಪ್ಪ ಗೌಡ, ಕೃಷ್ಣ ಕುಮಾರ್ ರೈ, ಕುಶಾಲಪ್ಪ ಗೌಡ, ಕೊರಗು ಯಾನೆ ಕೊರಗಪ್ಪ, ಬಾಲಕೃಷ್ಣ ಜೋಯಿಸ ಎರ್ಮುಂಜ, ಮೋಹನಾಂಗಿ, ಬಾಬು ಕೆಯ್ಯೂರು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ರಾಮಚಂದ್ರ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.