ಪುತ್ತೂರು: ಕಾಂಗ್ರೆಸ್ ಐ ಟಿ ಸೆಲ್ ಕಾರ್ಯದರ್ಶಿ ಹಿಂದು ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಲವು ಹಿಂದೂ ಪರ ಸಂಘಟನೆಗಳು ದೂರು ನೀಡಿತ್ತು., ಈ ಹಿನ್ನೆಲೆ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ನ್ಯಾಯವಾದಿ ಶೈಲಜಾ ಅಮರನಾಥ್ ಸಹಿತ ಮೂವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೈಲಜಾ ಅಮರನಾಥರವರು ಸಾಮಾಜಿಕ ಜಾಲತಾಣವಾದ ಕ್ಲಬ್ ಹೌಸ್ ಮೂಲಕ ನಡೆದ ಚರ್ಚಾಕೂಟದಲ್ಲಿ ಶ್ರೀರಾಮಚಂದ್ರ, ಸೀತಾಮಾತೆ ಮತ್ತು ಹನುಮಂತ ದೇವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷದ್, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಮುಖರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶೈಲಜಾ ರವರ ವಿರುದ್ಧ ರಾತ್ರಿ 8 ಗಂಟೆಯೊಳಗೆ ಪ್ರಕರಣ ದಾಖಲಿಸದಿದ್ದರೆ, ಠಾಣೆ ಎದುರು ಧರಣಿ ಕುಳಿತುಕೊಳ್ಳುವುದಾಗಿ, ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದರು. ಅದೇ ರೀತಿ ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗೀಯ ಸಹ ಸಂಯೋಜಕ್ ಅಜಿತ್ ರೈ ಹೊಸಮನೆ ರವರು ಪ್ರಕರಣ ದಾಖಲಿಸದಿದ್ದರೆ ಠಾಣೆ ಮುಂಭಾಗ ರಾತ್ರಿಯಿಂದ ಮುಂಜಾನೆ ವರೆಗೆ ಭಜನಾ ಕಾರ್ಯಕ್ರಮ ನಡೆಸುತ್ತೇವೆ, ಬೆಳಿಗ್ಗೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಬಗ್ಗೆ ಠಾಣೆಯಲ್ಲಿ ಶೈಲಜಾ ರವರ ವಿರುದ್ಧ ಐಪಿಸಿ ಸೆಕ್ಷನ್ 1860(u/s505(2), (34)ರಂತೆ ಪ್ರಕರಣ ದಾಖಲಾಗಿದೆ.