ಬೆಂಗಳೂರು: ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಎಂದು ಪರಿಚಯಿಸಿಕೊಂಡು ಊಟಿ ಮೂಲದ ಪ್ರಕಾಶ್ ಎಂಬಾತ ಹಲವರಿಗೆ ವಂಚನೆ ಮಾಡಿದ್ದಾನೆ. ವಿಚಾರಕ್ಕೆ ಸಂಬಂಧಿಸಿದಂತೆ ಶೋಭಾ ಕರಂದ್ಲಾಜೆ ಆಪ್ತ ಸಹಾಯಕ ವರುಣ್ ಆದಿತ್ಯಾ ಎಂಬುವವರು ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಪ್ರಕಾಶ್ ಚೆನ್ನೈ ಹಾಗೂ ಊಟಿಯಲ್ಲಿ ಜನರಿಂದ ಹಣ ಪಡೆದು ವಂಚನೆ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚೆನ್ನೈ, ಊಟಿಯ ಲ್ಯಾಂಡ್ ಲಾರ್ಡ್ರ್ಸ್, ಕೃಷಿಕರು ಹಾಗೂ ಬ್ಯುಸಿನೆಸ್ಮೆನ್ಗಳಿಗೆ ಕಳೆದ ಮೂರು ತಿಂಗಳಿಂದ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕಾಶ್ ಎಂಬಾತ ಶೋಭಾ ಕರಂದ್ಲಾಜೆ ಆಪ್ತ ಅಂತ ಹೇಳಿಕೊಂಡು ಹಣ ಪಡೆದಿದ್ದಾನಂತೆ. ಅಲ್ಲದೇ ಕೇಂದ್ರ ಸರ್ಕಾರದ ಟೆಂಡರ್ಗಳನ್ನು ಕೊಡಿಸುವುದಾಗಿ ಭರವಸೆ ಕೂಡ ಕೆಲವರಿಗೆ ನೀಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.
ವ್ಯಕ್ತಿಯೊಬ್ಬರು ಆರೋಪಿ ಪ್ರಶಾಶ್ ಶೋಭಾ ಕರಂದ್ಲಾಜೆ ಹೆಸರು ಹೇಳಿಕೊಂಡು ಹಣ ಪಡೆಯುತ್ತಿದ್ದಾನೆ ಎಂಬ ಮಾಹಿತಿಯನ್ನು ಸಚಿವರಿಗೆ ನೀಡಿದ್ದಾರೆ. ತಕ್ಷಣವೇ ಆತನ ಫೋನ್ ನಂಬರ್ ಪರಿಶೀಲನೆ ನಡೆಸಿದಾಗ, ಆತ ಸಚಿವರಿಗೆ ಪರಿಚಯದವನಲ್ಲ ಅನ್ನೋದು ಗೊತ್ತಾಗಿದೆ. ಸಚಿವರ ಆಪ್ತ ಸಹಾಯಕ ವರುಣ್ ಆದಿತ್ಯರಿಂದ ಇದೀಗ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ವಂಚನೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.