ವಿಟ್ಲ: ಮಹಿಳೆಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿಯ ನೇರಳಕಟ್ಟೆ ಎಂಬಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಸಮೀಪದ ಕೆಮನಾಜೆ ಕುಂಡಡ್ಕ ನಿವಾಸಿ, ಆಟೋ ಚಾಲಕ ಶ್ರೀಧರ್ (34) ಬಂಧಿತ ಆರೋಪಿ.
ಮಾಣಿಯ ಕಾಪಿಕಾಡು ನಿವಾಸಿ ದಿ. ತ್ಯಾಂಪ ಪೂಜಾರಿ ಅವರ ಪುತ್ರಿ, ಪ್ರಸ್ತುತ ಅನಂತಾಡಿಯ ದೇವಿ ನಗರ ನಿವಾಸಿ ಶಕುಂತಲಾ(35) ಸಾವನ್ನಪ್ಪಿದ ಮಹಿಳೆ.
ಶಕುಂತಲಾ ಪುತ್ತೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಆಕ್ಟೀವಾ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಬಂದ ಯುವಕ ಆಕೆಯ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಸಾವನ್ನಪಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಧರ್ಮಸ್ಥಳ ಬಳಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸಾವನ್ನಪ್ಪಿದ ಮಹಿಳೆಯ ಪತಿ ಸಂಜೀವ ರವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಕ್ರ. ನಂಬ್ರ: 107/2022 ಕಲಂ: 302 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ..!!??
ಸಂಜೀವ ರವರ ಹೆಂಡತಿ ಶಕುಂತಲಾ ಸುಮಾರು 5 ವರ್ಷಗಳಿಂದ ಪುತ್ತೂರಿನ ಕೊಂಬೆಟ್ಟು ಇನ್ ಲ್ಯಾಂಡ್ ಕಟ್ಟಡದ ಎದುರಿನಲ್ಲಿರುವ ವಿನಾಯಕ ಎಂಬ ಕ್ಯಾಂಟೀನ್ ವ್ಯವಹಾರ ನಡೆಸುತ್ತಿದ್ದು, ಇತ್ತೀಚೆಗೆ 1 ವರ್ಷದಿಂದ ಸ್ಕೂಟರ್ ನಲ್ಲಿ ಪುತ್ತೂರಿಗೆ ಹೋಗಿ ಬರುತ್ತಿದ್ದು ಅದಕ್ಕಿಂತ ಮುಂಚೆ ಅನಂತಾಡಿ ಗೋಳಿಕಟ್ಟೆಯ ಲಿಂಗಪ್ಪ ಎಂಬವರ ದೂರದ ಸಂಬಂಧಿಯಾದ ಯಮನಾಜೆಯ ಶ್ರೀಧರ ಎಂಬವನ ಆತನ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದರು.
ಸುಮಾರು 1 ವರ್ಷದ ಹಿಂದೆ ಶ್ರೀಧರನು ನಮ್ಮ ಮನೆಯ ಬಳಿಗೆ ಬಂದು ತನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಈತನು ತನ್ನ ಹೆಂಡತಿಯ ಸುದ್ದಿಗೆ ಬಾರದೇ ಇದ್ದು ನಮ್ಮ ಕ್ಯಾಂಟೀನ್ ನ ಬಳಿಯಲ್ಲಿ ಆತನು ಆಟೋ ರಿಕ್ಷಾದಲ್ಲಿ ಹೋಗುವ ಸಮಯ ಗುರಾಯಿಸಿಕೊಂಡು ಹೋಗುತ್ತಿರುವುದಾಗಿಯೂ, ಆತನನ್ನು ಕಂಡರೆ ನನಗೆ ಹದರಿಕೆ ಆಗುತ್ತಿದೆ ಎಂಬುದಾಗಿ ನನ್ನಲ್ಲಿ ಹೇಳುತ್ತಿದ್ದು, ಈ ದಿನ ಮಧ್ಯಾಹ್ನ 3.15 ಗಂಟೆ ಸಮಯವಾದರೂ ಹೆಂಡತಿ ಕ್ಯಾಂಟೀನ್ ಗೆ ಬಾರದೇ ಇದ್ದು, ಮಧ್ಯಾಹ್ನ ಸುಮಾರು 3.25 ಗಂಟೆ ಸಮಯಕ್ಕೆ ಅನಂತಾಡಿಯ ಸಂತೋಷ್ ಎಂಬಾತನು ಸಂಜೀವ ರವರಿಗೆ ಫೋನು ಮಾಡಿ ಹೆಂಡತಿ ಶಕುಂತಳರವರಿಗೆ ಕೊಡಾಜೆಯಲ್ಲಿ ಆಟೋ ರಿಕ್ಷಾ ಚಾಲಕನು ಚೂರಿಯಿಂದ ಹೊಟ್ಟೆಗೆ ಹಾಗೂ ದೇಹದ ಇತರ ಭಾಗಕ್ಕೆ ತಿವಿದು ಗಾಯಗೊಳಿಸಿದ್ದು, ಆಕೆಯನ್ನು ಮಾಣಿಯಿಂದ ಅಂಬ್ಯಲೆನ್ಸ್ ನವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ತಿಳಿಸಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ಹೆಂಡತಿಯ ಮುಖ, ಕೈಹೊಟ್ಟೆ, ತಲೆಯ ಭಾಗ ಹಾಗೂ ದೇಹದ ಇತರ ಕಡೆಗಳಲ್ಲಿ ರಕ್ತಗಾಯವಾಗಿ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದು, ತನ್ನ ಸಂಬಂಧಿಕರ ಮೊಬೈಲ್ ಗೆ ವಾಟ್ಸಪ್ ಮುಖಾಂತರ ವೀಡಿಯೊ ಒಂದು ಬಂದಿದ್ದು ಇದರಲ್ಲಿ ಆಟೋ ರಿಕ್ಷಾ ಚಾಲಕ ಗಣೇಶ್ ನಗರದ ಜನಪ್ರಿಯ ಹಾಲ್ ನ ಎದರು ಹೆದ್ದಾರಿಯ ಬದಿಯಲ್ಲಿ ಶಕುಂತಲಾ ರವರಿಗೆ ತಿವಿದು ಗಾಯಗೊಳಿಸಿರುವುದನ್ನು ಖಾಸಗಿ ಬಸ್ಸು ಚಾಲಕರೊಬ್ಬರು ವಿಡಿಯೋ ಚಿತ್ರೀಕರಣ ಮಾಡಿರುವುದು
ತಿಳಿದಿದ್ದು, ಶ್ರೀಧರನು ಸದ್ರಿ ಆಟೋವನ್ನು ಪುತ್ತೂರಿನಲ್ಲಿ ಚಲಾಯಿಸುವುದನ್ನು ಹೆಚ್ಚಾಗಿ ನೋಡಿದ್ದು ತನ್ನ ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಚೂರಿಯಿಂದ ತಿವಿದು ಕೊಲೆ ಮಾಡಿರುವುದಾಗಿದ್ದು ಶ್ರೀಧರನ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.