ಪುತ್ತೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಒಟ್ಟು 10 ಆರೋಪಿಗಳನ್ನು ಸೆರೆ ಹಿಡಿದಿರುವುದಕ್ಕೆ, ಮನೆಯವರು ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.
ಪ್ರವೀಣ್ ಹತ್ಯೆಯಾದ ದಿನದಂದು ಕುಟುಂಬಸ್ಥರು, ತನ್ನ ಮಗನ ಕಾರ್ಯ ಮುಗಿಯುವುದರೊಳಗೆ ಹಂತಕರನ್ನು ಹೆಡೆಮುರಿಕಟ್ಟುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು. ಹತ್ಯೆಯಾದ 16 ದಿನಗಳಲ್ಲಿ ಪ್ರಮುಖ ಆರೋಪಿಗಳು ಸೇರಿ 10 ಆರೋಪಿಗಳನ್ನು ಬಂಧಿಸಿದ್ದಾರೆ. ಇದಕ್ಕಾಗಿ ನೆಟ್ಟಾರು ಮನೆಯವರು ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.
ಹಂತಕರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಜಾಮೀನು ಕೊಡಬಾರದು. ಅವರ ಪರವಾಗಿ ಯಾವುದೇ ವಕೀಲರೂ ವಾದ ಮಂಡಿಸಬಾರದು ಎಂದು ಹೆತ್ತವರು ಮನವಿ ಮಾಡಿದ್ದಾರೆ.
ಪ್ರವೀಣ್ ತಾಯಿ ರತ್ನಾವತಿ ರವರು, ಬೆಳ್ಳಾರೆ ಠಾಣಾ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ನನ್ನ ಮಗನ ಹತ್ಯೆಯಾಗುತ್ತಿರಲ್ಲಿಲ್ಲ. ನನ್ನ ಪುತ್ರನ ಸ್ಥಿತಿ ಇನ್ಯಾರಿಗೂ ಬಾರದಿರಲಿ ಎಂದು ಕಣ್ಣೀರು ಹಾಕಿದ್ದಾರೆ.