ಉಪ್ಪಿನಂಗಡಿ: ಅದೃಷ್ಟ ಗ್ರಾಹಕರಾಗಿ ಆಯ್ಕೆಯಾಗಿದ್ದೀರಿ ಈ ಹಿನ್ನಲೆ 8,800 ರೂ. ಮುಖ ಬೆಲೆಯ ಮೊಬೈಲ್ ಫೋನ್ 1,785 ಕ್ಕೆ ಕಳುಹಿಸಲಾಗಿದೆ ಎಂಬ ಸಂದೇಶವನ್ನು ನಂಬಿ ಅಂಚೆ ಮೂಲಕ ಬಂದ ಪಾರ್ಸೆಲ್ ಖರೀದಿಸಿದ ವ್ಯಕ್ತಿಯೋರ್ವರಿಗೆ ಮೊಬೈಲ್ ಫೋನ್ ಬದಲು ಹಳಸಿ ಹೋದ ತಿಂಡಿಯ ಪೊಟ್ಟಣದ ಪಾರ್ಸೆಲ್ ಕಳುಹಿಸಿ ವಂಚನೆ ಎಸಗಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವಸ್ಥಾನವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಭವಾನಿ ಶಂಕರ್ ಅವರು ಇತ್ತೀಚೆಗೆ ತಮ್ಮ ಕುಟುಂಬ ಸದಸ್ಯರಿಗೆ ಮೂರು ವಿವೋ ಕಂಪನಿಯ ಮೊಬೈಲ್ ಫೋನ್ಗಳನ್ನು ಖರೀದಿಸಿದ್ದರು.
ವಿವೋದ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕರೆ ಮಾಡಿ ‘ಮೂರು ಮೊಬೈಲ್ ಫೋನ್ ಖರೀದಿಸಿದ್ದಕ್ಕೆ ತಮ್ಮ ಕಂಪನಿಯ ಅದೃಷ್ಟದ ಗ್ರಾಹಕ ಎಂದು ಆಯ್ಕೆಯಾಗಿದ್ದೀರಿ ಹೀಗಾಗಿ 1785 ರೂ.ಗೆ 8800 ರೂ ಮೌಲ್ಯದ ಮೊಬೈಲ್ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ ಎಂದು ತಿಳಿಸಿದ್ದರು.
ತಾನು ಫೋನ್ ಖರೀದಿಸಿರುವುದು ನಿಜವಾಗಿರುವಾಗ ನನಗೆ ಅದೃಷ್ಟ ಒಲಿದಿರುವುದು ನಿಜವಾಗಿರಬಹುದೆಂದು ನಂಬಿದ ಭವಾನಿ ಶಂಕರ್ ಸೆ.12 ರಂದು ಉಪ್ಪಿನಂಗಡಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಅನ್ನು ಹಣ ತೆತ್ತು ಪಡೆದುಕೊಂಡರಲ್ಲದೆ, ಸಂದೇಹ ಬಗೆಹರಿಸಲು ಅಲ್ಲಿಯೇ ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್ ಮಾಡಿ ಕಳುಹಿಸಿರುವುದು ಕಂಡು ಬಂದಿದೆ.