ಪುತ್ತೂರು: ತಾಲೂಕು ಪಾಣಾಜೆ ಹಿರಿಯ ಪ್ರಾರ್ಥಮಿಕ ಶಾಲೆಯ ಎಸ್ ಡಿ ಎಂ ಸಿ ಊರ್ಜಿತದಲ್ಲಿ ಇರುವಾಗಲೇ ಹೊಸ ಸಮಿತಿ ರಚನೆಗೆ ಗ್ರಾ.ಪಂ. ಅಧ್ಯಕ್ಷರ ಸೂಚನೆಯಂತೆ ಶಾಲಾ ಮುಖ್ಯಗುರುಗಳು ಕರೆದಿದ್ದ ಎಸ್ ಡಿ ಎಂ ಸಿ ಸಭೆಗೆ ಎಸ್ ಡಿ ಎಂ ಸಿ ಅಧ್ಯಕ್ಷೆ ಸೀತಾ ಉದಯ ಶಂಕರ್ ಭಟ್ ರವರು ಹೈ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು.
ಪಾಣಾಜೆ ದ ಕ ಹಿ ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿ ರಚನೆಯ ಬಗ್ಗೆ ವಿದ್ಯಾರ್ಥಿಗಳ ಪೋಷಕರ ಸಭೆಯು ದಿನಾಂಕ 30/10/2021ರಂದು ಪಾಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು.
ಈ ಸಭೆಯಲ್ಲಿ ಸೇರಿದ್ದ ಪೋಷಕರು ನಿಯಮದಂತೆ ಒಟ್ಟು 18 ಜನರನ್ನು ಎಸ್ ಡಿ ಎಂ ಸಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರು. ಆ ಬಳಿಕ ನಡೆದ ಎಸ್ ಡಿ ಎಂ ಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮೂರು ಜನರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಇಳಿದ ಕಾರಣ ಚುನಾವಣೆ ನಡೆಸಲಾಗಿತ್ತು.
ಎಸ್ ಡಿ ಎಂ ಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಸೀತಾ ಉದಯ ಶಂಕರ್ ಭಟ್ ಹಾಗೂ ಹಿಂದಿನ ಅಧ್ಯಕ್ಷ ಅಬೂಬಕ್ಕರ್ ಆರ್ಲಪದವು ರವರಿಗೆ ಸಮಾನ ಮತಗಳು ಬಂದ ಕಾರಣ ಪಂಚಾಯತಿ ಅಧ್ಯಕ್ಷರು ಇಬ್ಬರು ಅಭ್ಯರ್ಥಿಗಳ ಹೆಸರಿನ ಚೀಟಿಯನ್ನು ಎತ್ತುವ ಪ್ರಕ್ರಿಯೆ ನಡೆಸಿದರು. ಚೀಟಿ ಎತ್ತಿದಾಗ ಸೀತಾ ಉದಯ ಶಂಕರ್ ಭಟ್ ರವರ ಹೆಸರು ಬಂದದ್ದರಿಂದ ಸೀತಾ ಉದಯ ಶಂಕರ್ ಭಟ್ ರವರನ್ನು ಶಾಲೆಯ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿ ಸಭೆಯ ನಡವಳಿಯಲ್ಲಿ ದಾಖಲಿಸಲಾಗಿತ್ತು. ಆ ಬಳಿಕ ಸೀತಾ ಉದಯ ಶಂಕರ್ ಭಟ್ ರವರು ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ತನ್ನ ಶಾಲಾ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.
ಕೆಲವು ದಿನಗಳ ಬಳಿಕ ಅಧ್ಯಕ್ಷರು ಎಸ್ ಡಿ ಎಂ ಸಿ ಸಭೆ ಕರೆಯಬೇಕೆಂದು ಮುಖ್ಯ ಗುರುಗಳಲ್ಲಿ ಕೇಳಿ ಕೊಂಡಾಗ ಮುಖ್ಯ ಗುರುಗಳು ಎಸ್ ಡಿ ಎಂ ಸಿ ಬಗ್ಗೆ ತಕರಾರು ಇದೆ ಈ ಕುರಿತು ಪಂಚಾಯತ್ ನ ಸೂಚನೆ ಬರದೆ ಸಭೆ ಕರೆಯಲು ಸಾಧ್ಯವಿಲ್ಲವೆಂದು ತಿಳಿಸಿದ್ದರು. ಇದರಿಂದ ನೊಂದು ಎಸ್ ಡಿ ಎಂ ಸಿ ರಚನೆಯ ಬಗ್ಗೆ ನಡೆದ ಸಭೆಯ ನಡವಳಿಯ ಪ್ರತಿ ಕೇಳಿ ಕೊಂಡಾಗ ತನ್ನ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಮುಖ್ಯ ಗುರುಗಳ ಕರ್ತವ್ಯಲೋಪದ ಕುರಿತು ಸೀತಾ ಉದಯ ಶಂಕರ್ ಭಟ್ ರವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು. ಈ ಬೆಳವಣಿಗೆಯ ನಡುವೆ ನೂತನ ಎಸ್ ಡಿ ಎಂ ಸಿ ರಚನೆ ಮಾಡಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷರ ಸೂಚನೆಯಂತೆ ಶಾಲಾ ಮುಖ್ಯ ಗುರುಗಳಾದ ಶೀಲಾವತಿಯವರು ಹೊಸ ಎಸ್ ಡಿ ಎಂ ಸಿ ರಚನೆ ಮಾಡುವ ಕುರಿತು ಜ 14/1/2022 ರಂದು ಪೋಷಕರ ಸಭೆ ಕರೆದಿದ್ದರು.
ಎಸ್ ಡಿ ಎಂ ಸಿ ರಚನೆಯಾಗಿ ಅಧ್ಯಕ್ಷರಾಗಿ ನೇಮಕಗೊಂಡು ಎಸ್ ಡಿ ಎಂ ಸಿ ಸಮಿತಿ ಊರ್ಜಿತದಲ್ಲಿರೂವಾಗಲೇ ನಿಯಮ ಬಾಹಿರವಾಗಿ ಪುನ:ಎಸ್ ಡಿ ಎಂ ಸಿ ರಚನೆಯ ಬಗ್ಗೆ ಕರೆದಿರುವ ಸಭೆಯು ಕಾನೂನು ಬಾಹಿರವೆಂದು ಈ ಸಭೆಯನ್ನು ರದ್ದುಪಡಿಸಬೇಕೆಂದು, ಈ ರೀತಿ ಕಾನೂನು ಬಾಹಿರವಾಗಿ ಸಭೆ ಕರೆದಿರುವ ಮುಖ್ಯ ಗುರುಗಳ ವಿರುದ್ಧ ಹಾಗೂ ಅಧಿಕಾರವಿಲ್ಲದಿದ್ದರು ಶಾಲಾ ಎಸ್ ಡಿ ಎಂ ಸಿ ರಚನೆಯಲ್ಲಿ ಮೂಗು ತೂರಿಸುತ್ತಿರುವ ಪಂಚಾಯತ್ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೀತಾ ಉದಯ ಶಂಕರ್ ಭಟ್ ರವರು ರಿಟ್ ಅರ್ಜಿ ಸಲ್ಲಿಸಿ ಜ.14 ರ ಎಸ್ ಡಿ ಎಂ ಸಿ ರಚನೆ ಸಭೆಗೆ ಹೈ ಕೋರ್ಟ್ ನಿಂದ ತನ್ನ ವಕೀಲರಾದ ಲತೀಫ್ ಬಡಗನ್ನೂರು ಮೂಲಕ ತಡೆಯಾಜ್ಞೆ ತಂದಿದ್ದರು.
ಇದರಿಂದ ಶಾಲಾ ಎಸ್ ಡಿ ಎಂ ಸಿ ಸಭೆ ನಡೆಯದೆ ಶಾಲಾ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿತ್ತು ಹಾಗೂ ಶಾಲೆಗೆ ಬಿಡುಗಡೆಯಾದ ಅನುದಾನವನ್ನು ಖರ್ಚು ಮಾಡಲು ತೊಂದರೆಯಾಗಿತ್ತು. ಶಾಲೆಯ ಮಕ್ಕಳಿಗೆ ತೊಂದರೆಯಾಗುತ್ತಿರುವುದು ಮನಗಂಡ ಶಾಲಾ ಪೋಷಕರು ದಿನಾಂಕ 8/12/2022 ರಂದು ಸಭೆ ಸೇರಿ ಕಾನೂನು ರೀತಿಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಆಯ್ಕೆಯಾದ ಸೀತಾ ಉದಯ ಶಂಕರ್ ಭಟ್ ರವರವರನ್ನು ಅಧ್ಯಕ್ಷರಾಗಿ ಮುಂದುವರಿಸಬೇಕು ಹಾಗೂ ಸೀತಾ ಭಟ್ ರವರು ಹೈ ಕೋರ್ಟ್ ನಲ್ಲಿ ಹೂಡಿರುವ ದಾವೆಯನ್ನು ಹಿಂಪಡೆಯ ಬೇಕೆಂದು ನಿರ್ಣಯ ಕೈಗೊಂಡು ಆಗ್ರಹಿಸಿದ್ದರು.
ಪೋಷಕರ ಹಾಗೂ ಊರಿನವರ ಆಗ್ರಹದಂತೆ ಎಸ್ ಡಿ ಎಂ ಸಿ ಸಮಸ್ಯೆಯನ್ನು ಪರಿಹರಿಸಲು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಬೇಳೂರು ರವರು ಎಸ್ ಡಿ ಎಂ ಸಿ ಉರ್ಜಿತದಲ್ಲಿರುವಾಗಲೇ ಹೊಸ ಎಸ್ ಡಿ ಎಂ ಸಿ ರಚನೆ ಮಾಡುವರೆ ನೋಟೀಸ್ ನೀಡಿರುವುದು ನಿಯಮಬಾಹಿರ ನೀವು ಮಾಡಿರುವ ಎಡವಟ್ಟಿನಿಂದಾಗಿ ಈ ಎಲ್ಲಾ ಸಮಸ್ಯೆಗಳು ಉಂಟಾಗಲು ಕಾರಣವೆಂದು ಶಾಲಾ ಮುಖ್ಯ ಗುರುಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಬಳಿಕ ನ್ಯಾಯಾಲಯ ತಡೆಯಾಜ್ಞೆ ತಂದಿರುವ ಸೀತಾ ಭಟ್ ರವರಲ್ಲಿ ಹಾಗೂ ಕೆಲವು ಮುಖಂಡರ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಮುಂದಾಗಿ ಇದಕ್ಕೆ ಪರಿಹಾರವಾಗಿ ಸೀತಾ ಭಟ್ ರವರಲ್ಲಿ ದಾವೆ ವಾಪಸ್ ಪಡೆಯಲು ಕೇಳಿಕೊಂಡಿದ್ದರು. ಶಾಲಾ ಪೋಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೋರಿಕೆಯಂತೆ ಸೀತಾ ಉದಯ ಶಂಕರ್ ಭಟ್ ರವರು ಭಟ್ ರವರು ಹೈ ಕೋರ್ಟ್ ನಲ್ಲಿರುವ ದಾವೆಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿ ದಾವೆಯನ್ನು ಹಿಂಪಡೆದಿದ್ದರು. ಇದರಂತೆ ದಿನಾಂಕ 23/2/2023 ರಂದು ಎಸ್ ಡಿ ಎಂ ಸಿ ಅಧ್ಯಕ್ಷೆ ಸೀತಾ ಉದಯ ಶಂಕರ್ ಭಟ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿವಾದಕ್ಕೆ ತೆರೆ ಎಳೆಯಲಾಯಿತು ಎಂದು ತಿಳಿದು ಬಂದಿದೆ.