ಪುತ್ತೂರು: ಹಿಂದು ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಕ್ರೈಸ್ತರು ನಡೆಸುವ ಸಂಸ್ಥೆಗಳ ಹೆಸರನ್ನು ಹೇಳಿ ದ್ವೇಷಪೂರಿತ ಭಾಷಣ ಮಾಡಿರುವುದು ಸಮುದಾಯಕ್ಕೆ ನೋವಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಯಿ ದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರು ಮತ್ತು ಧರ್ಮಗುರುಗಳಾಗಿರುವ ಲಾರೆನ್ಸ್ ಮಸ್ಕರೇನ್ಹಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕ್ರೈಸ್ತರು ನಡೆಸುವ ಶಿಕ್ಷಣ ಸಂಸ್ಥೆಗಳಾದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆ, ಸಂತ ಫಿಲೋಮಿನಾ ಕಾಲೇಜು, ಸಂತ ವಿಕ್ಟರ್ನ ಪ್ರೌಢಶಾಲೆ, ಬೆಥನಿ ಶಿಕ್ಷಣ ಸಂಸ್ಥೆಗಳು, ಫಾದರ್ ಪತ್ರಾವೋ ಆಸ್ಪತ್ರೆಯ ಪರವಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾ.25 ರಂದು ವಾಟ್ಸಾಪ್ನಲ್ಲಿ ಪ್ರಚಾರವಾಗುತ್ತಿರುವ ಹಿಂದು ಜಾಗರಣ ವೇದಿಕೆಯ ಕಾರ್ಯಕ್ರಮದ ಭಾಷಣದಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಕ್ರೈಸ್ತ ಸಮುದಾಯದ ವಿರುದ್ಧ ನೇರವಾಗಿ ಸಮಾಜದಲ್ಲಿ ಅಶಾಂತಿಯನ್ನು ತರುವಂತೆ ಮಾತುಗಳನ್ನಾಡಿದ್ದಾರೆ. ಮಾತ್ರವಲ್ಲದೆ ಕೋಮು ಗಲಭೆಯನ್ನು ಸೃಷ್ಟಿಸಲು ಪ್ರಚೋದನೆ ನೀಡಿದ್ದಾರೆ.
ಕ್ರೈಸ್ತರು ನಡೆಸುವ ಸಂಸ್ಥೆಗಳಾದ ಸಂತ ಫಿಲೋಮಿನಾ ಕಾಲೇಜು, ಫಾದರ್ ಪತ್ರವೋ ಆಸ್ಪತ್ರೆ, ಬೆಥನಿ ಶಿಕ್ಷಣ ಸಂಸ್ಥೆ ಸಂತ ವಿಕ್ಟರನ ಸಂಸ್ಥೆ ಅದೇ ರೀತಿ ಮಂಜಲ್ಪಡುವಿನಲ್ಲಿರುವ ಸುಧಾನ ಸಂಸ್ಥೆಯ ಹೆಸರನ್ನು ಹೇಳಿ ಈ ಜಾಗವೆಲ್ಲಾ ಹಿಂದುಗಳದ್ದು ಬ್ರಿಟೀಷರು ಅವರಿಗೆ ನೀಡಿದ್ದು, ಅವರಿಗೆ ಜಾಗ ನೀಡಿ ಹಿಂದುಗಳಿಗೆ ಜಾಗವಿಲ್ಲದಂತಾಗಿದೆ ಎಂದು ಹೇಳಿದ್ದಾರೆ. ಆದರೇ ಇವರ ಮಕ್ಕಳು ಮತ್ತ ಪತ್ನಿ ಇದೇ ಸಂತ ವಿಕ್ಟರನ ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ ಇವತ್ತು ಕ್ರೈಸ್ತ ಸಮುದಾಕ್ಕೆ ಅಪಮಾನ ಮಾಡಿರುವುದು ನೋವು ತಂದಿದೆ.
ದ್ವೇಷ ಭಾಷಣಗಳಂತಹ ಚಟುವಟಿಕೆಗಳು ಅಘಾತಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಲ್ಲಿ ಭಾರತೀಯ ದಂಡ ಸಂಹಿತೆ 1890ರ ಅಡಿಯಲ್ಲಿ ಡಾ. ಎಂ.ಕೆ.ಪ್ರಸಾದ್ ಅವರು ವಿವಿಧ ಅಪರಾಧಗಳನ್ನು ಮಾಡಿದ್ದಾರೆ. ಇಂತಹ ದ್ವೇಷ ಪೂರಿತ ಭಾಷಣಗಳಿಗೆ ಕಡಿವಾಣ ಹಾಕಿ, ಡಾ.ಎಂ.ಕೆ.ಪ್ರಸಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಾವು ಸಹಾಯಕ ಕಮೀಷನರ್ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಗೆ ಜ್ಞಾಪಕ ಪತ್ರ ನೀಡಿದ್ದೇವೆ ಎಂದು ಅವರು ಹೇಳಿದ ಅವರು ವೀಡಿಯೋವನ್ನು ಯೂಟ್ಯೂಬ್ ಚಾನೆಲ್ ಮತ್ತಿತರ ಸಾಮಾಜಿಕ ಜಾಲತಾಣಗಳಿಂದ ತಕ್ಷಣ ಅಳಿಸಬೇಕು ಮತ್ತು ಕ್ಷಮೆಯಾಚಿಸಬೇಕೆಂದು ಅವರು ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೇರೋ ಅವರು ಮಾತನಾಡಿ, ಸಂತ ಪಿಲೋಮಿನಾ ಶಿಕ್ಷಣ ಸಂಸ್ಥೆ ಸ್ವಾತಂತ್ರ್ಯ ಬಳಿಕ ಸ್ಥಾಪನೆ ಆದದ್ದು 1958ರಲ್ಲಿ ಸಂತಫಿಲೋಮಿನಾ ಸಂಸ್ಥೆ ಅದಕ್ಕಿಂತ 5 ವರ್ಷದ ಹಿಂದೆ ಸಂತಫಿಲೋಮಿನಾ ಹೈಸ್ಕೂಲ್ ಸ್ಥಾಪನೆ ಆಗಿತ್ತು. ಈ ನಿಟ್ಟಿನಲ್ಲಿ ಡಾ. ಎಂ.ಕೆ.ಪ್ರಸಾದ್ ಅವರು ಹೇಳಿದ ಹೇಳಿಕೆ ಸತ್ಯಕ್ಕೆ ದೂರವಾದದ್ದು ಪ್ರಸಾದ್ ಭಂಡಾರಿಯರನ್ನು ಬಹಳಷ್ಟು ಸಲ ನಮ್ಮ ಸಂಸ್ಥೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ವೈಯುಕ್ತಿಕವಾಗಿ ನನಗೆ ಅತ್ಯಂತ ಆತ್ಮೀಯರು. ಅವರ ಜೊತೆ ಬಾಂಧವ್ಯ ಅದ್ಭುತವಾಗಿದೆ. ಇವತ್ತಿಗೂ ಆ ಬಾಂಧವ್ಯ ಇದೆ. ಇಂತಹ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ನಂತರ ಬಂದ ಸಂಸ್ಥೆಗಳ ಕುರಿತು ಆ ರೀತಿಯ ಹೇಳಿಕೆ ನೀಡಿರುವುದು ನಮ್ಮ ಸಮುದಾಯಕ್ಕೆ ನೋವಾಗಿದೆ. ಅವರು ಮಾತನಾಡಿದ ವಿಚಾರ ಹೇಗೆ ವೈರಲ್ ಆಯಿತೋ ಅದೇ ರೀತಿ 7 ವರ್ಷದ ಹಿಂದೆ ಕ್ರಿಸ್ಮಸ್ ಕೇಕ್ ನಾನೇ ಅವರಿಗೆ ಬಾಯಿಗೆ ನೀಡಿದ್ದು ಕೂಡಾ ವೈರಲ್ ಆಯಿತು. ಆದರೆ ನಮಗೆ ಇವತ್ತಿಗೂ ಅವರು ಆತ್ಮೀಯರೇ. ಹಾಗಾಗಿ ನಾನೆ ಅವರಲ್ಲಿ ಕುದ್ದು ಮಾತನಾಡುತ್ತೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಫಿಲೋಮಿನಾ ಕಾಲೇಜಿನ ಕ್ಯಾಂಪಸ್
ನಿರ್ದೇಶಕ ಸ್ಪ್ಯಾನಿ ಪಿಂಟೋ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ, ಚರ್ಚ್ನ ಪಾಲನ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಜಾನ್ ಕುಟಿನ್ಹೋ, ಜೋ ಡಿಸೋಜಾ ಉಪಸ್ಥಿತರಿದ್ದರು.



























