ಪುತ್ತೂರು : ವಿಧಾನ ಸಭಾ ಕ್ಷೇತ್ರದಲ್ಲಿ ಈಗ ಸ್ಪರ್ಧಿಯಾಗಿರುವ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ತವರುಮನೆ ಸುಳ್ಯ. ಈಗ ವಾಸ್ತವ್ಯ ಇರುವ ಕಡಬ ಕೂಡಾ ಸುಳ್ಯ ವಿಧಾನಸಭಾ ಕ್ಷೇತ್ರ. ಇದೇ ಕ್ಷೇತ್ರದಲ್ಲಿ ಅವರು ಒಂದು ಬಾರಿ ನಗರ ಪಂಚಾಯತ್ ಅಧ್ಯಕ್ಷರಾಗಿ, ಮೂರು ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ದಿವ್ಯಪ್ರಭಾ ಚಿಲ್ಲಡ್ಕ ಸುಳ್ಯ ತಾಲೂಕಿನ ಗುತ್ತಿಗಾರಿನವರು. ರಾಜಕೀಯ ಹಿನ್ನೆಲೆಯಿಂದಲೇ ಬಂದಿರುವ ದಿವ್ಯಪ್ರಭಾ ಈ ಹಿಂದೆ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿದ್ದವರು.
ಪುತ್ತೂರಿನಲ್ಲಿ ಎಸ್ಡಿಪಿಐ ಅಭ್ಯರ್ಥಿಯಾಗಿರುವ ಶಾಫಿ ಬೆಳ್ಳಾರೆ ಸುಳ್ಯ ತಾಲೂಕಿನ ಬೆಳ್ಳಾರೆಯವರು. ಎಸ್ಡಿಪಿಐ ರಾಜ್ಯ ಕಾರ್ಯದರ್ಶಿಯಾಗಿರುವ ಇವರು ಪ್ರಸ್ತುತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿದ್ದು ಅಲ್ಲಿಂದಲೇ ಸ್ಪರ್ಧೆ ನಡೆಸುತ್ತಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿರುವ ಡಾ. ಬಿ.ಕೆ. ವಿಶುಕುಮಾರ್ ಅವರು ಮೂಲತಃ ಸುಳ್ಯ ತಾಲೂಕಿನವರು. ಇಲ್ಲಿನ ಪಂಜದಲ್ಲಿ ಹುಟ್ಟಿ ಬೆಳೆದದವರು. ಮೈಸೂರಿನಲ್ಲಿ ಕೃಷಿ ವಿಜ್ಞಾನಿಯಾಗಿ ಸ್ವಂತ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಪ್ರಸ್ತುತ ಪುತ್ತೂರಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿಯಿಂದ ಸ್ಪರ್ಧಿಸುತ್ತಿರುವ ಐವನ್ ಫೆರಾವೋ ಸುಳ್ಯ ತಾಲೂಕಿನ ಬೆಳ್ಳಾರೆಯ ಪನ್ನೆಯವರು.
ಒಟ್ಟಿನಲ್ಲಿ ಈ ಬಾರಿ ಸುಳ್ಯ ತಾಲೂಕಿನ ಐವರು ಪುತ್ತೂರಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.