ಮಂಗಳೂರು : ವಿರೋಧಿ ಪಕ್ಷದ ಅಪಪ್ರಚಾರ ನಡುವೆಯೂ ನಿರೀಕ್ಷಿತ ರೀತಿಯಲ್ಲಿ ನಮಗೆ ಐತಿಹಾಸಿಕ ಹಾಗೂ ಅಪೂರ್ವ ಗೆಲುವು ದಾಖಲಾಗಲಿದೆ. ಕಾರ್ಯಕರ್ತರ ಅವಿರತ ಶ್ರಮ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಜಿಲ್ಲೆಯ ಜನರಿಗೆ ಮುಖ್ಯವಾಗಿ ನಾರಿಶಕ್ತಿಗೆ ಇರುವ ಅಭಿಮಾನದಿಂದಾಗಿ ಜೂ.4ರಂದು ಬಿಜೆಪಿ ಅಭೂತಪೂರ್ವ ಜಯ ಸಾಧಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಜಿಲ್ಲೆಯಾದ್ಯಂತ ಓಡಾಡಿ ಕಾರ್ಯಕರ್ತರನ್ನು ತಲಪಿದ್ದೇನೆ. ಕಾರ್ಯಕರ್ತರೂ ಈ ಸುಡುಬಿಸಿಲಿನಲ್ಲೂ ಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಜನರು ಪ್ರಜಾಪ್ರಭುತ್ವದ ಈ ಉತ್ಸವವನ್ನು ಸಂಭ್ರಮಿಸುವ ರೀತಿಯಲ್ಲಿ ದೊಡ್ಡಸಂಖ್ಯೆಯಲ್ಲಿ ಮತ ಹಾಕಿದ್ದಾರೆ ಎಂದು ಅಭಿನಂದಿಸಿದರು.
ನಾರಿಶಕ್ತಿಗೆ ಗೌರವವಾಗಿ ಮೊದಲ ಒಂಭತ್ತು ಮತ ಹಾಕಲು ಕರೆಕೊಟ್ಟಿದ್ದೆ, ಆದರೆ ಸಂಘಟನಾತ್ಮಕವಾಗಿ ಮಾಡುವಂತೆ ತಿಳಿಸಿರಲಿಲ್ಲ, ಹಾಗಿದ್ದರೂ ಬಹುತೇಕ ಬೂತ್ಗಳಲ್ಲಿ ಮಹಿಳೆಯರು ಪ್ರಾರ್ಥನೆ ಮಾಡಿ, ಮೊದಲ ಮತ ಚಲಾಯಿಸಿದ್ದಾರೆ.
ಮೋದಿ ಯವರಿಗೆ ತಾಯಂದಿರ ಆಶೀರ್ವಾದ ಇದೆ, ಹಾಗಾಗಿ ಮತ್ತೂಮ್ಮೆ ಮೋದಿ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ದ.ಕ. ಜಿಲ್ಲೆಯನ್ನು ತಪ್ಪಾಗಿ ಹೊರ ಜಗತ್ತಿಗೆ ಇದುವರೆಗೆ ತೋರಿಸಲಾಗಿದೆ, ಆದರೆ ಜಿಲ್ಲೆ ಸತ್ಯಧರ್ಮದ ಒಳ್ಳೆಯ ಜನರಿರುವ ಜಿಲ್ಲೆ. ಹಾಗಾಗಿ ಜಿಲ್ಲೆಯ ನಿಜಕತೆಯನ್ನು ಹೊರ ಜಗತ್ತಿಗೆ ತೋರಿಸುವ ಕೆಲಸ ಮಾಡಬೇಕಿದೆ, ಅದಕ್ಕಾಗಿ ನಿಜಕತೆಯನ್ನು ಉತ್ತಮವಾಗಿ ತೆರೆದಿಡುವವರಿಗೆ ಹಿರಿಯ ಪತ್ರಕರ್ತ, ದಿ. ಮನೋಹರ ಪ್ರಸಾದ್ ಅವರ ಹೆಸರಿನಲ್ಲಿ ವಾರ್ಷಿಕವಾಗಿ ಪ್ರಶಸ್ತಿ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.
ಜಿಲ್ಲೆಯನ್ನು ಋಣಾತ್ಮಕವಾಗಿ ಬಿಂಬಿಸಿದರೆ ಬಂಡವಾಳ ಹೂಡಿಕೆ ಕಡಿಮೆಯಾಗುತ್ತದೆ. ಉದ್ಯೋಗ ಸೃಷ್ಟಿ ಹಾಗೂ ಬಂಡವಾಳ ಹೂಡಿಕೆ ಹೆಚ್ಚಾಗುವ ನಿಟ್ಟಿನಲ್ಲಿ ಜಿಲ್ಲೆಯ ನಿಜಕತೆಯನ್ನು ಹೊರಜಗತ್ತಿನ ಮುಂದಿರಿಸುವ ಅಗತ್ಯವಿದೆ ಎಂದರು.
ಜಿಲ್ಲೆಯ ಜನರ ಮನಸ್ಸಿನಲ್ಲಿ ಮೋದಿಯವರು ಇದ್ದಾರೆ, ಮೋದಿಯವರೇ ಅಜೆಂಡಾ ಆಗಿದ್ದಾರೆ, ಆದರೆ ಸ್ಪರ್ಧಿಗಳು ಮತದಾರರ ದಾರಿತಪ್ಪಿಸುವ ಯತ್ನ ಮಾಡಿದ್ದಾರೆ, ಆದರೆ ಅದು ವಿಫಲವಾಗಲಿದೆ ಎಂದರು.
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಮತದಾರರು, ಅಧಿಕಾರಿ ವರ್ಗ, ಪಕ್ಷದ ಕಾರ್ಯಕರ್ತರ ಅವಿರತ ಶ್ರಮಕ್ಕಾಗಿ ಅಭಿನಂದನೆ ಸಲ್ಲಿಸಿ, ಜಿಲ್ಲೆಯಲ್ಲಿ ಶಾಂತಿಯುತವಾಗಿ, ಬಿರುಬಿಸಿಲಲ್ಲೂ ಅತ್ಯಧಿಕ ಮತದಾನ ನಡೆದಿರುವುದು ಶ್ಲಾಘನೀಯ ಎಂದರು.
ಕ್ಯಾ. ಗಣೇಶ್ ಕಾರ್ಣಿಕ್, ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್ ಉಪಸ್ಥಿತರಿದ್ದರು.