ಬೆಂಗಳೂರು : ‘ಮನದ ಕಡಲು’ ಸಿನಿಮಾ ಚಿತ್ರೀಕರಣದ ವೇಳೆ 30 ಅಡಿ ಎತ್ತರದಿಂದ ಬಿದ್ದು ಲೈಟ್ ಮ್ಯಾನ್ ಸಾವನ್ನಪ್ಪಿರೋ ಘಟನೆ ನೆಲಮಂಗಲದ ಅಡಕಮಾರನಹಳ್ಳಿ ಬಳಿ ನಡೆದಿದೆ.
ಮೋಹನ್ ಕುಮಾರ್ ಮೃತ ಯುವಕ.
ಮೋಹನ್ ಕುಮಾರ್ ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್, ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್, ಅಡಕಮಾರನಹಳ್ಳಿಯ ಕೃಷ್ಣಪ್ಪ ವಿರುದ್ದ ಎಫ್ಐಆರ್ ದಾಖಲಾಗಿದೆ.
ಸೆಪ್ಟೆಂಬರ್ 3ರಂದು ಅಡಕಮಾರನಹಳ್ಳಿ ಗೋಡೌನ್ವೊಂದರಲ್ಲಿ ಬಳಿ ಮನದ ಕಡಲು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. 30 ಅಡಿ ಎತ್ತರದ ಅಲ್ಯೂಮಿನಿಯಂ ರೋಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿದ್ದ. ಇದೇ ವೇಳೆ ಲೈಟ್ ಮ್ಯಾನ್ ಏಕಾಏಕಿ ಕೆಳಗಡೆ ಬಿದ್ದಿದ್ದಾನೆ. ಪರಿಣಾಮ ಮೋಹನ್ ಕುಮಾರ್ ತಲೆಗೆ ಗಂಭೀರ ಪೆಟ್ಟಾಗಿದೆ. ಆ ಕೂಡಲೇ ಆತನನ್ನು ಗೋರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಲೈಟ್ ಮ್ಯಾನ್ ಮೃತಪಟ್ಟಿದ್ದಾರೆ. ಹೀಗಾಗಿ ಲೈಟ್ ಮ್ಯಾನ್ ಸಹೋದರ ಶಿವರಾಜ್ ದೂರಿನನ್ವಯ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.



























