ಪುತ್ತೂರು: ಬನ್ನೂರು ಸಮೀಪ ಬೈಕ್ ಮತ್ತು ಮಾರುತಿ ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ಬೆಳ್ಳಿಪ್ಪಾಡಿಯ ದಯಾನಂದ್ ಗೌಡ ಎಂಬವರು ತೀವ್ರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಗಾಯಗೊಂಡ ದಯಾನಂದ್ ಅವರನ್ನು ತಕ್ಷಣ ಸ್ಥಳೀಯರಾದ ಅಝೀಝ್ ಮತ್ತು ರಫೀಕ್ ಬಾಂಬೆ ಅವರು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿದ್ದಾರೆ.
ಬನ್ನೂರು ಆಯೋಧ್ಯಾನಗರ ಶಿವಪಾರ್ವತಿ ಮಂದಿರ ಬಳಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಬೆಳ್ಳಿಪ್ಪಾಡಿ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ದಯಾನಂದ್ ಗೌಡ ಅವರು ವಿವೇಕಾನಂದ ಕಾಲೇಜು ರಸ್ತೆಯಾಗಿ ಪಡೀಲ್ ಕಡೆ ಬೈಕ್ ಚಲಾಯಿಸುತ್ತಿದ್ದ ವೇಳೆ ಬನ್ನೂರು ಮಸೀದಿ ಬಳಿ ಅವರ ಮೊಬೈಲ್ ಬಿದ್ದು ಹೋಗಿತ್ತು. ಬಿದ್ದ ಮೊಬೈಲ್ ತಾನು ಪಡೆದು ಬಳಿಕ ಬೈಕ್ ಚಲಾಯಿಸಿ ಮುಂದೆ ಹೋಗುತ್ತಿದ್ದಂತೆ ಬನ್ನೂರು ಶಿವಪಾರ್ವತಿ ಮಂದಿರದ ಬಳಿ ಹಂಪ್ಸ್ ಬಳಿ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಮಾರುತಿ ಓಮ್ನಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬೈಕ್ ಸವಾರ ದಯಾನಂದ್ ಅವರು ತೀವ್ರ ಗಾಯಗೊಂಡಿದ್ದರು. ತಕ್ಷಣ ಸ್ಥಳಿಯರಾದ ಅಝೀಝ್ ಮತ್ತು ರಫೀಕ್ ಅವರು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರು ಅಸ್ಪತ್ರೆಗೆ ಕರೆದೊಯ್ದಿದ್ದಾರೆ.