ಶ್ರೀಲಂಕಾದ ದಂಬುಲಾದಲ್ಲಿ ನಡೆದ ಟ್ರೈ-ನೇಷನ್ ‘ಎ’ ಸರಣಿಯ 4ನೇ ಪಂದ್ಯವು ಹೈ-ಡ್ರಾಮಾಗೆ ಸಾಕ್ಷಿಯಾಗಿದೆ. ಭಾರತ ಎ ಮತ್ತು ಶ್ರೀಲಂಕಾ ಎ ನಡುವಣ ಏಕದಿನ ಪಂದವು ಮೊದಲಿಗೆ ಟೈನಲ್ಲಿ ಅಂತ್ಯಗೊಂಡಿತು. ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದೆ. ಈ ಸೋಲಿನ ಬೆನ್ನಲ್ಲೇ ಆಟಗಾರರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಈ ಮ್ಯಾಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ‘ಎ’ ತಂಡ ಸೂರ್ಯಂಶ್ ಶೆಡ್ಗೆ (72) ಅವರ ಅರ್ಧಶತಕದ ನೆರವೇರಿಕೆಯಿಂದ 265 ರನ್ ಗಳಿಸಿತ್ತು. ಶ್ರೀಲಂಕಾ ತಂಡವೂ ಸರಿಯಾಗಿ 265 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಗಿ, ಸೂಪರ್ ಓವರ್ ಆಡಲಾಯಿತು.
ಸೂಪರ್ ಓವರ್ನಲ್ಲಿ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್ ಗುರಿ ನೀಡಿತು.17 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ ಹಾಗೂ ಸೂರ್ಯಂಶ್ ಶೆಡ್ಗೆ ಕಣಕ್ಕಿಳಿದಿದ್ದರು.ಸೂಪರ್ ಓವರ್ನ ಮೊದಲ 4 ಎಸೆತಗಳಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು 5 ರನ್ಗಳು ಮಾತ್ರ. ಅದರಂತೆ ಕೊನೆಯ 2 ಎಸೆತಗಳಲ್ಲಿ ಭಾರತ ತಂಡಕ್ಕೆ 12 ರನ್ಗಳು ಬೇಕಿದ್ದವು. 5ನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ ಫೋರ್ ಬಾರಿಸಿದರು. ಆದರೆ ಶ್ರೀಲಂಕಾದ 19 ವರ್ಷದ ಮಿಸ್ಟರಿ ಸ್ಲಿಂಗರ್ ಕುಗಥಾಸ್ ಮಥುಲನ್ ಎಸೆದ ಕೊನೆಯ ಎಸೆತವನ್ನು ಕನೆಕ್ಟ್ ಮಾಡಲು ವೈಭವ್ ವಿಫಲರಾದರು. ಈ ಮೂಲಕ ಟೀಮ್ ಇಂಡಿಯಾ 7 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಸೂಪರ್ ಓವರ್ನಲ್ಲಿ 7 ರನ್ಗಳಿಂದ ಗೆಲ್ಲುತ್ತಿದ್ದಂತೆ ಶ್ರೀಲಂಕಾ ಆಟಗಾರರು ಅತಿಯಾದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಾಗೆ, ನಿರಾಸೆಯಿಂದ ಪೆವಿಲಿಯನ್ಗೆ ಮರಳುತ್ತಿದ್ದ ವೈಭವ್ ಸೂರ್ಯವಂಶಿಯವರನ್ನು ನೋಡಿ ಅದೇನೋ ಹೇಳಿದ್ದಾರೆ.
ಈ ಮಾತಿನಿಂದ ಕೆರಳಿದ 15 ವರ್ಷದ ವೈಭವ್ ಸೂರ್ಯವಂಶಿ, ನೇರವಾಗಿ ಹಾಲಂಬಾಗೆ ಅವರತ್ತ ಧಾವಿಸಿ ಮಾತಿನ ಚಕಮಕಿ ನಡೆಸಿದರು. ಈ ವಾಗ್ವಾದದ ನಡುವೆ ವೈಭವ್, ಲಂಕಾ ಆಟಗಾರನ ಎದೆಗೆ ಜೋರಾಗಿ ಕೈಯಿಂದ ತಳ್ಳಿದ್ದಾರೆ. ಆಟಗಾರರ ನಡುವಣ ಈ ಜಗಳದಿಂದಾಗಿ ಮೈದಾನದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ತಕ್ಷಣವೇ ಶ್ರೀಲಂಕಾದ ಹಿರಿಯ ವಿಕೆಟ್ಕೀಪರ್ ನಿರೋಷನ್ ಡಿಕ್ವೆಲ್ಲಾ ಮತ್ತು ಕೆಲ ಆಟಗಾರರು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು.
ಸದ್ಯ ಶ್ರೀಲಂಕಾ ಎ ವಿರುದ್ಧ ಸೋತಿರುವ ಭಾರ ಎ ತಂಡವು ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ್ ಎ ವಿರುದ್ಧ ಆಡಲಿದೆ. ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ತ್ರಿಕೋನ ಸರಣಿಯಲ್ಲಿ ಫೈನಲ್ ಆಡಬಹುದು.


























