ಉಪ್ಪಿನಂಗಡಿ: ಭೂ ದಾಖಲೆಗಳನ್ನು ದಾಖಲೀಕರಿಸುವ ವೇಳೆ ಪಕ್ಕದ ಜಮೀನನ್ನು ಸೇರಿಸಲಾಗಿದೆ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಲಾಗಿದೆ ಎಂದು ಡಾಕ್ಯೂಮೆಂಟ್ ರೈಟರ್ ರೋರ್ವರು ನೀಡಿದ ದೂರಿನಂತೆ ಕರಾಯ ನಿವಾಸಿ ಚರಣ್ ಎಂಬವರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಡಾಕ್ಯೂಮೆಂಟ್ ರೈಟರ್, ಕರಾಯ ಗ್ರಾಮದ ನಿವಾಸಿಯಾಗಿರುವ ಕೆ.ಎಸ್.ಅಬ್ದುಲ್ಲಾ ಎಂಬವರು ದೂರು ನೀಡಿದ್ದು, ‘ಜೂ.25ರಂದು ಸಂಜೆ 6 ಗಂಟೆ ವೇಳೆಗೆ ಕರಾಯದ ಪೆಟ್ರೋಲ್ ಪಂಪಿನಲ್ಲಿ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿ ಹೊರಡುವ ಸಮಯದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ಕರಾಯ ನಿವಾಸಿ ಚರಣ್ ಎಂಬಾತ ದ್ವಿಚಕ್ರ ವಾಹನಕ್ಕೆ ಕಾರನ್ನು ಅಡ್ಡವಾಗಿರಿಸಿ ಸಂಚಾರಕ್ಕೆ ತಡೆಯೊಡ್ಡಿರುವುದಲ್ಲದೆ ಅವಾಚ್ಯ ಪದಗಳಿಂದ ತನಗೆ ನಿಂದಿಸಿರುತ್ತಾರೆ’ ಎಂದು ಆರೋಪಿಸಿದ್ದಾರೆ.
ಕರಾಯ ಗ್ರಾಮದ ವ್ಯಕ್ತಿಯೋರ್ವರ ಭೂ ದಾಖಲೆಗಳ ದಾಖಲೀಕರಣದ ವೇಳೆ ಆರೋಪಿತರ ಭೂಮಿಯೂ ಸೇರಿರುವುದಕ್ಕೆ ನಾನೇ ಕಾರಣವೆಂದು ಭಾವಿಸಿ ನನ್ನ ವಿರುದ್ಧ ಈ ಕೃತ್ಯಗೈದಿರುತ್ತಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



























