ಮಂಗಳೂರು: ಕಳೆದ ವರ್ಷ ಉಳ್ಳಾಲದ ಮಂಜನಾಡಿಯಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ಇದೀಗ ಹೊಸ ಜೀವನದ ಆಶಾಕಿರಣ ಮೂಡಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನದ ಫಲವಾಗಿ ಮಹಾರಾಷ್ಟ್ರದ ಲೋಧಾ ಚಾರಿಟೇಬಲ್ ಟ್ರಸ್ಟ್ ಸುಮಾರು ₹23 ಲಕ್ಷ ವೆಚ್ಚದ ಅತ್ಯಾಧುನಿಕ ಕೃತಕ ಕಾಲುಗಳನ್ನು ಒದಗಿಸಲು ಮುಂದಾಗಿದೆ.
2025ರ ಮೇ 30ರಂದು ಮಂಜನಾಡಿಯ ಮೊಂಟೆಪದವು-ಕೊಪ್ಪಳ ಮಲ್ಲಿ ಪ್ರದೇಶದಲ್ಲಿ ಸಂಭವಿಸಿದ ದುರಂತದಲ್ಲಿ ಅಶ್ವಿನಿ ಅವರ ಇಬ್ಬರು ಮಕ್ಕಳು ಹಾಗೂ ಅತ್ತೆ ಮೃತಪಟ್ಟಿದ್ದರು. ಅಶ್ವಿನಿ ಅವರು ಎರಡೂ ಕಾಲುಗಳನ್ನು ಕಳೆದುಕೊಂಡರೆ, ಅವರ ಮಾವ ಒಂದು ಕಾಲು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು.
ಮಂಗಳವಾರ ಅಶ್ವಿನಿ ಅವರ ನಿವಾಸಕ್ಕೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲ್, ಲೋಧಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೃತಕ ಕಾಲುಗಳಿಗಾಗಿ ₹23 ಲಕ್ಷ ಮೊತ್ತವನ್ನು ಎಂಡೋಲೈಟ್ ಸಂಸ್ಥೆಗೆ ಪಾವತಿಸಿರುವುದಾಗಿ ತಿಳಿಸಿದರು. ಮುಂದಿನ ಒಂದು ತಿಂಗಳು ತಜ್ಞರಿಂದ ತರಬೇತಿ ನೀಡಿದ ಬಳಿಕ ಕೃತಕ ಕಾಲುಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ವೇಳೆ ಅಶ್ವಿನಿ ಅವರು ಲೋಧಾ ಟ್ರಸ್ಟ್, ನಳಿನ್ ಕುಮಾರ್ ಕಟೀಲ್ ಹಾಗೂ ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಳಿನ್ ಕುಮಾರ್ ಕಟೀಲ್ ಅವರು ಸರ್ಕಾರದಿಂದ ನಿವೇಶನ ದೊರೆತಲ್ಲಿ ಬಿಜೆಪಿ ವತಿಯಿಂದ ಮನೆ ನಿರ್ಮಿಸಿಕೊಡುವ ಭರವಸೆಯನ್ನೂ ನೀಡಿದರು.
ಇನ್ನೊಂದೆಡೆ, ಈ ದುರಂತವು ಪ್ರಾಕೃತಿಕ ವಿಕೋಪವಲ್ಲ, ರಸ್ತೆ ನಿರ್ಮಾಣದ ವೇಳೆ ನಡೆದ ಅವೈಜ್ಞಾನಿಕ ಕಾಮಗಾರಿಯಿಂದ ಸಂಭವಿಸಿದ ಮಾನವ ನಿರ್ಮಿತ ದುರಂತ ಎಂದು ಅಶ್ವಿನಿ ಕುಟುಂಬ ಆರೋಪಿಸುತ್ತಿದೆ. ಈ ಕುರಿತು ಎನ್ಐಟಿಕೆ ತಾಂತ್ರಿಕ ವರದಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಕುಟುಂಬ ತಿಳಿಸಿದೆ. ಸೂಕ್ತ ಪರಿಹಾರ ಮತ್ತು ಹೊಣೆಗಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಕರಣ ಹೈಕೋರ್ಟ್ನಲ್ಲಿದೆ.
ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದಲ್ಲಿ 2025 ರ ಮೇ 30 ರಂದು ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿದ್ದ ಸಹೋದರಿ ಅಶ್ವಿನಿ ಅವರಿಗೆ ಕೃತಕ ಕಾಲುಗಳನ್ನು ಅಳವಡಿಸಲು ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಲ್. ಸಂತೋಷ್ ಜಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಶ್ರೀ ಪ್ರಕಾಶ್ ಪಿ.ಎಸ್ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಆರ್ಥಿಕ ಸಹಕಾರಕ್ಕಾಗಿ ನನ್ನ ಪ್ರೀತಿಯ ಮನವಿಯನ್ನು ಪರಿಗಣಿಸಿ ಇದಕ್ಕೆ ತಗಲುವ 23 ಲಕ್ಷ ರೂಪಾಯಿಗಳನ್ನು ನೀಡಿದ ಮಹಾರಾಷ್ಟ್ರ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಶ್ರೀ ಮಂಗಲ್ ಪ್ರಭಾತ್ ಲೋಧ ಅವರಿಗೂ, ಅವರ ಲೋಧ ಚಾರಿಟೇಬಲ್ ಟ್ರಸ್ಟ್ ಗೂ ಸಂತ್ರಸ್ತೆ, ಆಕೆಯ ಕುಟುಂಬ, ಜಿಲ್ಲಾ ಭಾಜಪಾದ ಮುಖಂಡರು, ಕಾರ್ಯಕರ್ತರು ಹಾಗೂ ನನ್ನ ವೈಯಕ್ತಿಕ ನೆಲೆಯಲ್ಲಿಯೂ ಅನಂತಾನಂತ ಧನ್ಯವಾದಗಳು – ನಳಿನ್ ಕುಮಾರ್ ಕಟೀಲ್


























