ಬೆಳ್ತಂಗಡಿ: ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವ್ಯಾಪ್ತಿಯ ದಿಡುಪೆ-ಸಂಸೆ ರಸ್ತೆಯಲ್ಲಿ ಅನಧಿಕೃತವಾಗಿ ಸಂಚರಿಸಿ, ವೀಡಿಯೋ ಪ್ರಸಾರ ಮಾಡಿದ ಸೋಶಿಯಲ್ ಮೀಡಿಯಾ ಪ್ರಚಾರಕರ ವಿರುದ್ಧ ಕ್ರಮ ಕೈಗೊಂಡು, ದಂಡ ವಿಧಿಸಲಾಗಿದೆ.
ದಿಡುಪೆ- ಸಂಸೆ ರಸ್ತೆಯಲ್ಲಿ ವನ್ಯಜೀವಿಗಳ ಓಡಾಟ, ತೊರೆ, ಹಳ್ಳಗಳು ಇವೆ. ಅಲ್ಲದೆ ಮಳೆಗಾಲದಲ್ಲಿ ಈ ರಸ್ತೆ ಅತ್ಯಂತ ದುರ್ಗಮ ಹಾಗೂ ಅಪಾಯಕಾರಿಯಾಗಿದೆ. ಹೀಗಾಗಿ ಇಲ್ಲಿನ ಸ್ಥಳೀಯ ಜನರಿಗೆ ಮಾತ್ರ ಪ್ರಸ್ತುತ ಸಂಚಾರಕ್ಕೆ ಅವಕಾಶವಿದೆ. ಈ ಬಗ್ಗೆ ದಿಡುಪೆಯಲ್ಲಿ ಇಲಾಖೆ ವತಿಯಿಂದ ಗೇಟು ಅಳವಡಿಸಿ ಸೂಚನಾ ಫಲಕವನ್ನು ಹಾಕಲಾಗಿದೆ.
ಆದರೂ ಅನಧಿಕೃತವಾಗಿ ಗೇಟು ತೆರೆದು ಹಲವು ಮಂದಿ ಸಾಮಾಜಿಕ ಜಾಲತಾಣ ಪ್ರಚಾರಕರು ಈ ರಸ್ತೆ ಮೂಲಕ ಸಂಚರಿಸಿದ್ದಲ್ಲದೆ ವೀಡಿಯೋ ಹಾಗೂ ಫೋಟೋಗಳನ್ನು ಇನ್ಸ್ಟಾಗ್ರಾಮ್, ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಈಗ ಇಲಾಖೆಯು ಇಂಥವರ ವಿರುದ್ಧ ಕ್ರಮ ಕೈಗೊಂಡಿದ್ದು, ಹಲವರಿಗೆ ಮಂದಿಗೆ ನೋಟಿಸು ನೀಡಿ ದಂಡ ವಿಧಿಸಿದೆ.
ಸ್ಥಳೀಯರ ವಿನಾ ಈ ರಸ್ತೆಯಲ್ಲಿ ಇತರರಿಗೆ ಸಂಚರಿಸಲು ಅವಕಾಶ ಇಲ್ಲ. ಅನಧಿಕೃತವಾಗಿ ಸಂಚರಿಸುವವರ ವಿರುದ್ಧ ಇಲಾಖೆ ವತಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್ ಎಫ್ ಒ ಶರ್ಮಿಷ್ಟಾ ತಿಳಿಸಿದ್ದಾರೆ.

























