ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ವಿಟ್ಲ ಇದರ ಜಾನ್ಸಿರಾಣಿ ಜ್ಞಾನವಿಕಾಸ ಕೇಂದ್ರ ವತಿಯಿಂದ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮವೂ ಸರಕಾರಿ ಪ್ರೌಢಶಾಲೆ ಗೋಳ್ತಮಜಲಿನಲ್ಲಿ ಜರಗಿತು.
ಕಾರ್ಯಕ್ರಮವನ್ನು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ 2ನೇ ವಿಭಾಗದ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ, ಜ್ಞಾನ ವಿಕಾಸ ಕೇಂದ್ರ ಉದ್ದೇಶ ಹಾಗೂ ಪ್ರಾಮುಖ್ಯತೆ. ಪೌಷ್ಟಿಕ ಆಹಾರಗಳ ಮಹತ್ವ , ಮನೆ ಮತ್ತು ಮಹಿಳೆ ,ಮಹಿಳೆ ಮತ್ತು ಆರೋಗ್ಯ, ಮಹಿಳೆ ಮತ್ತು ಸಂಸ್ಕೃತಿ ಈ ವಿಷಯಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ವಹಿಸಿ ಜ್ಞಾನವಿಕಾಸ ಕೇಂದ್ರದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಪಂಚಾಯತ್ ಮಟ್ಟದಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜ್ಞಾನವಿಕಾಸ ಕೇಂದ್ರದ ಸದಸ್ಯರು ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದು ವಿವಿಧ ಪೌಷ್ಟಿಕಾಂಶ ಯುಕ್ತ ಆಹಾರಗಳಾದ ತಜಂಕ್ ವಡೆ, ವಿಟಮಿನ್ ಸೊಪ್ಪು ಪಲ್ಯ, ಕೆಸುವಿನ ದಂಡಿನ ಸಾಂಬಾರು,ಹಲಸಿನ ಬೀಜದ ಲಡ್ಡು, ನುಗ್ಗೆ ಸೊಪ್ಪು ಪಲ್ಯ, ಕ್ಯಾರೆಟ್ ಹಲ್ವ, ಸೋನೆ ಸೊಪ್ಪು ಚಟ್ನಿ, ವಿವಿಧ ರೀತಿಯ ಖಾದ್ಯಗಳನ್ನು ತಮ್ಮ ಮನೆಯಲ್ಲಿ ಮಾಡಿ ತಂದಿದ್ದು ಅವುಗಳನ್ನು ಪ್ರದರ್ಶನಕ್ಕೆ ಇಟ್ಟು ಅದರ ತಯಾರಿಕ ವಿಧಾನ ಹಾಗೂ ಅದರಿಂದಾಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಉತ್ತಮ ರೀತಿಯಲ್ಲಿ ಆಹಾರ ಖಾದ್ಯಗಳನ್ನು ಮಾಡಿದವರಿಗೆ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ, ಪಂಚಾಯತ್ ಸದಸ್ಯ ಶ್ರೀಮತಿ ಜಯಂತಿ ಜನಾರ್ಧನ್,ಗೋಳ್ತಮಜಲು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾಲತಾ, ಗ್ರಾಮಾಭಿವೃದ್ಧಿ ಯೋಜನೆ ವೀರಕಂಭ ಒಕ್ಕೂಟ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ. ಯೋಜನೆಯ ಕೃಷಿ ಅಧಿಕಾರಿ ಚಿದಾನಂದ, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಸವಿತಾ, ಸೇವಾ ಪ್ರತಿನಿಧಿ ಶ್ರೀಮತಿ ರೇವತಿ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳಿಂದ ಕುಣಿತ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.