ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಸುಮಾರು 50ರಿಂದ 60 ಜನರಿದ್ದ ಗುಂಪೊಂದು ಯಾವುದೇ ಪೂರ್ವಾನುಮತಿ ಪಡೆಯದೆ, ಭದ್ರತೆಗೆ ಅವಕಾಶ ನೀಡದೆ ಪ್ರವೇಶಿಸಿ, ನಿತ್ಯಕಾರ್ಯಗಳಿಗೆ ತೊಂದರೆ ಉಂಟು ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ್ದಾಗಿ ಹಾಗೂ ಕೋವಿಡ್ ನಿಯಮ ಉಲ್ಲಂಘಿಸಿರುವುದಾಗಿ ಆರೋಪಿಸಿ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಗಸ್ಟ್ 31ರಂದು ಬೆಳಿಗ್ಗೆ 11.30 ಗಂಟೆಗೆ ಬಿ ಮೂಡ ಗ್ರಾಮದ ಬಿ.ಸಿ. ರೋಡಿನ ತಾಲೂಕು ಆಫೀಸ್ ನಲ್ಲಿ ಕೋವಿಡ್-19 ಕ್ಕೆ ಸಂಬಂಧಪಟ್ಟಂತೆ ವ್ಯಾಕ್ಸಿನ್ ಹಾಗೂ ಕಾರ್ಮಿಕ ವರ್ಗದವರಿಗೆ ಉಚಿತ್ ಕಿಟ್ ವಿತರಿಸಲ್ಪಡುವ ಸಂದರ್ಭದಲ್ಲಿ ಏಕಪಕ್ಷೀಯವಾದ ರ್ತಿರ್ಮಾನಗಳನ್ನು ತೆಗೆದುಕೊಂಡು ದುರುಪಯೋಗಪಡಿಸಲಾಗುತ್ತಿದೆ. ಈ ಆರೋಪವನ್ನು ಇಟ್ಟುಕೊಂಡು ಸುಮಾರು 50 ರಿಂದ 60 ಜನರಿದ್ದ ಗುಂಪೊಂದು ಯಾವುದೇ ಪುರ್ವಾನುಮತಿಯನ್ನು ಪಡೆದುಕೊಳ್ಳದೇ ಹಾಗೂ ಭದ್ರತೆಗೆ ಅವಕಾಶಗಳನ್ನು ನೀಡದೇ ಏಕಾಏಕಿಯಾಗಿ ಸಾರ್ವಜನಿಕ ಕಚೇರಿಗಳುಳ್ಳ ಬಂಟ್ವಾಳ ಮಿನಿ ವಿಧಾನ (ತಾಲೂಕು ಆಫೀಸ್) ಒಳ ಆವರಣಕ್ಕೆ ಪ್ರವೇಶಿಸಿದ್ದಾರೆ.
ಘೋಷಣೆಗಳನ್ನು ಕೂಗುತ್ತ, ತಾಲೂಕು ಕಚೇರಿಯನ್ನೊಳಗೊಂಡಂತೆ ಇತರ ಕಚೇರಿಗಳ ದಿನನಿತ್ಯದ ಕೆಲಸ-ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿರುವುದಲ್ಲದೇ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸದೆ ಹಾಗೂ ಸದ್ರಿ ಕಚೇರಿಯ ಆವರಣದಲ್ಲಿದ್ದ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗಿದ್ದು ಕಂಡು ಬರುತ್ತದೆ. ಪ್ರತಿಭಟನೆಯ ಸಂದರ್ಭದಲ್ಲಿ ಆರೋಪಿತರು ಸರಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಹಾಗೂ ಪರಿಷ್ಕೃತ ಆದೇಶಗಳನ್ನು ಉಲ್ಲಂಘಿಸಿದ್ದಾರೆ ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.