ಕಾಸರಗೋಡು: ಗುಂಡು ಹಾರಾಟ ಹಾಗೂ ಯುವಕನ ಕೊಲೆ ಯತ್ನ ಸೇರಿದಂತೆ ಎರಡು ಪ್ರತ್ಯೇಕ ಪ್ರಕರಣದ ಇಬ್ಬರು ಆರೋಪಿಗಳನ್ನು ಕಾಸರಗೋಡು ಡಿವೈಎಸ್ಪಿಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತರನ್ನು ಮಿತ್ತನಡ್ಕದ ನವಾಫ್ ( 33) ಮತ್ತು ಉಪ್ಪಳದ ಮುಜಾ ಹಿದ್ದೀನ್ ( 30) ಎಂದು ಗುರುತಿಸಲಾಗಿದೆ.

ಬಂಧಿತರಲ್ಲಿ ಓರ್ವ ಆರೋಪಿ ನವಾಫ್ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಮಿತ್ತನಡ್ಕ ನಿವಾಸಿಯಾಗಿದ್ದಾನೆ.
ಏಳು ತಿಂಗಳ ಹಿಂದೆ ಉಪ್ಪಳದ ಹಿದಾಯತ್ ನಗರದಲ್ಲಿ ನವಾಫ್ ನೇತೃತ್ವದ ತಂಡವು ರಿವಾಲ್ವರ್ ಹಾಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ ದಾಂಧಲೆ ನಡೆಸಿತ್ತು. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಠಾಣಾ ಪೊಲೀಸರನ್ನು ಕಂಡು ತಂಡವು ಪರಾರಿಯಾಗಿತ್ತು.
ಇದೇ ತಂಡ ವಿಟ್ಲ ಪೊಲೀಸರ ಮೇಲೆಯೂ ದಾಳಿ ನಡೆಸಿದ್ದು, ಈ ಪ್ರಕರಣದಲ್ಲಿ ನವಾಫ್ ಶಾಮೀಲಾಗಿದ್ದನು. ನವಾಫ್ ಮಾದಕ ಸಾಗಾಟ ಪ್ರಕರಣದಲ್ಲೂ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ
ಇನ್ನೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಜಾಹಿದ್ದೀನ್ ಎಂಬಾತನನ್ನು ಬಂಧಿಸಲಾಗಿದ್ದು, ಎರಡು ವರ್ಷಗಳ ಹಿಂದೆ ಕುಬಣೂರಿನಲ್ಲಿ ಹುಸೈನಾರ್ ಎಂಬವರನ್ನು ತಡೆದು ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈತ ಹಾಗೂ ಇತರ ಮೂವರು ಸೇರಿ ಕೊಲೆಗೆ ಯತ್ನಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಈ ಹಿಂದೆ ಬಂಧಿಸಲಾಗಿತ್ತು.