ಪುತ್ತೂರು: ವೀಕೆಂಡ್ ಕರ್ಫ್ಯೂ ನಿಮಿತ್ತ ಈಗಾಗಲೇ ಅಗತ್ಯ ವಸ್ತು ಹೊರತು ಪಡಿಸಿ ಇತರೆ ವ್ಯಾಪಾರ ಮಾಡುವುದನ್ನು ನಿಷೇಧಿಸಿದ್ದು, ಪುತ್ತೂರು ತಾಲೂಕಿನ ವರ್ತಕರು ವೀಕೆಂಡ್ ಕರ್ಫ್ಯೂ ತೆರವು ಗೊಳಿಸುವಂತೆ ಮನವಿ ಸಲ್ಲಿಸಿದ್ದರು ಹಾಗೂ ಈ ವಾರ ವೀಕೆಂಡ್ ಕರ್ಫ್ಯೂ ದಿನಗಳಲ್ಲಿ ವ್ಯವಹಾರ ನಡೆಸುವುದಾಗಿ ತಿಳಿಸಿದ್ದರು.
ಕಳೆದ ಹಲವು ವಾರಗಳಿಂದ ವೀಕೆಂಡ್ ಕರ್ಫ್ಯೂನಿಂದಾಗಿ ತತ್ತರಿಸಿದ್ದ ವರ್ತಕರು ಈ ಬಾರಿ ವ್ಯಾಪಾರ ನಡೆಸುವುದಾಗಿ ತೀರ್ಮಾನಿಸಿದ್ದರು. ಆದರೆ ಅಧಿಕಾರಿಗಳು, ಶಾಸಕರ ಮನವಿಗೆ ಇದೀಗ ವರ್ತಕರು ಸ್ಪಂದಿಸಿದ್ದಾರೆ. ಈ ವಾರವೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಈ ನಿಯಮವನ್ನು ಪಾಲಿಸಲು ತಮ್ಮ ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ.
ವರ್ತಕ ಸಂಘದ ಪದಾಧಿಕಾರಿಗಳು ಶಾಸಕರನ್ನು ಇಂದು ಭೇಟಿ ವೀಕೆಂಡ್ ಕರ್ಪ್ಯೂ ದಿನ ಅಂಗಡಿಗಳನ್ನು ಓಪನ್ ಮಾಡಿ ಪ್ರತಿಭಟನೆ ಸಲ್ಲಿಸುವ ಬಗ್ಗೆ ಬೆಂಬಲ ಕೋರಿದ ಸಂದರ್ಭದಲ್ಲಿ ಸೋಮವಾರ ದಿವಸ ಮುಖ್ಯಮಂತ್ರಿಗಳು , ಉಸ್ತುವಾರಿ ಸಚಿವರುಗಳಲ್ಲಿ ಮಾತನಾಡಿ ಮುಂದಿನ ವಾರದ ಅಂತ್ಯದ ಮೊದಲು ನಮ್ಮಲ್ಲಿ ವೀಕೆಂಡ್ ಕರ್ಪ್ಯೂವನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳುವ ಬಗ್ಗೆ ಭರವಸೆ ನೀಡಿರುವುದರಿಂದ ನಾಳೆಯ ದಿನ (04/09/2021) ಎಲ್ಲಾ ಅಂಗಡಿಗಳನ್ನು ಓಪನ್ ಮಾಡಿ ಪ್ರತಿಭಟನೆ ಮಾಡುವುದನ್ನು ಮುಂದೂಡಲಾಗಿದೆ.
ಸೋಮವಾರದ ಸಭೆಯಲ್ಲಿ ಯಾವುದೇ ನಿರ್ಣಯ ನಮ್ಮ ಪರವಾಗಿ ಬಾರದೆ ಇದ್ದರೆ ನಂತರ ಸಂಘದ ಸಭೆ ಸೇರಿ ನಿರ್ಣಯ ಕೈಗೊಳ್ಳೋಣ ಎಂದು ಪುತ್ತೂರು ವಾಣಿಜ್ಯ ಮತ್ತು ವರ್ತಕ ಸಂಘದ ಅಧ್ಯಕ್ಷರು/ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.