ಉದನೆ: ತಡ ರಾತ್ರಿ ಯಾರೋ ಕಿಡಿಗೇಡಿಗಳು ಗಣಪತಿ ಕಟ್ಟೆಯನ್ನು ಪುಡಿ ಮಾಡಿದ ಘಟನೆ ಕಡಬ ತಾಲೂಕಿನ ಉದನೆಯಲ್ಲಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ್ ರಾಜ್ಯದ ಬಾಗಲ್ ಪುರ್ ಜಿಲ್ಲೆಯ ಸುದಾಮ್ ಗೋಪಾಲ್ ಪುರ್ ತಾಲೂಕಿನ ಗರ್ನಿಯಾ ನಿವಾಸಿ ರವೀಂದ್ರ(25) ಕುಮಾರ್ ಎಂದು ಗುರುತಿಸಲಾಗಿದೆ.
ಈತನ ವಿರುದ್ಧ ಈ ಹಿಂದೆ ಆಟೋ ಚಾಲಕನಿಗೆ ಕಲ್ಲು ಎಸೆದು ಹಲ್ಲೆ ನಡೆಸಿದ ಬಗ್ಗೆಯೂ ದೂರು ದಾಖಲಾಗಿತ್ತು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವೂ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ದೊರಕಿದ್ದ 50 ರೂ. ನೋಟಿನ ತುಣುಕು ಅನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಅದೇ 50 ರೂ. ನೋಟಿನ ಹರಿದ ಇನ್ನೊಂದು ಭಾಗವೂ ಆರೋಪಿಯ ಬರ್ಮುಡ ಚಡ್ಡಿಯಲ್ಲಿ ಪತ್ತೆಯಾಗಿದೆ. ಕಾರ್ಯಚರಣೆಯಲ್ಲಿ ಹೆಚ್.ಸಿ ಹಿತೋಷ್ ಕುಮಾರ್, ಪಿಸಿ ಯೋಗರಾಜ್ ಪಾಲ್ಗೊಂಡಿದ್ದರು.
ಸೆ.11 ರಂದು ಕಡಬ ತಾಲೂಕು ಕೊಣಾಜೆ ಗ್ರಾಮದ ಉದನೆ ಪರಶುರಾಮ್ ಮೈದಾನ ಎಂಬಲ್ಲಿರುವ ಗಣಪತಿ ಕಟ್ಟೆಯೊಳಗೆ ಅಕ್ರಮ ಪ್ರವೇಶ ಮಾಡಿ ಗಣಪತಿ ಕಟ್ಟೆಯ ಮೆಟ್ಟಿಲು ಗೋಡೆ ಆವರಣವನ್ನು ಕಲ್ಲಿನಿಂದ ಗುದ್ದಿ ಪುಡಿ ಮಾಡಿದ್ದು, ಸುಮಾರು 10,000 ರೂ. ನಷ್ಟ ಉಂಟಾಗಿದೆ.