ಪುತ್ತೂರು: ಅಕ್ರಮವಾಗಿ ಬೆಲೆ ಬಾಳುವ ಮರಗಳನ್ನು ದಾಸ್ತಾನು ಇರಿಸಿದ ಕುರಿತು ಪುತ್ತೂರು ಅರಣ್ಯ ಇಲಾಖೆ, ಕರ್ನಾಟಕ ಅರಣ್ಯ ರಬ್ಬರ್ ನಿಗಮದ ನೌಕರರೊಬ್ಬರ ಮನೆಗೆ ದಾಳಿ ನಡೆಸಿದ ಘಟನೆ ಅರಿಯಡ್ಕ ಗ್ರಾಮದ ಮಡ್ಯಂಗಳದಲ್ಲಿ ನಡೆದಿದೆ.
ಪುತ್ತೂರು ಕೆಎಫ್ಡಿಸಿ ಇಲಾಖೆಯ ನೌಕರರಾಗಿರುವ ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಅರುಣ್ ಕುಮಾರ್ ರವರ ಮನೆಯಲ್ಲಿ ಸುಮಾರು ರೂ. 2.5 ಲಕ್ಷಕ್ಕೂ ಮಿಕ್ಕಿದ ಬೀಟೆ, ಹಲಸು, ಸಾಗುವಾಣಿ ಮತ್ತು ಇತರೆ ಜಾತಿಯ ಮರಗಳ ದಿಮ್ಮಿಗಳು ದಾಸ್ತಾನು ಇರುವುದನ್ನು ಪುತ್ತೂರು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ. ಸ್ಥಳಕ್ಕೆ ತೆರಳಿ ಮರಗಳನ್ನು ಸ್ವಾಧೀನ ಪಡಿಸಿಕೊಂಡು ಅರುಣ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.