ಮೂಡಬಿದ್ರೆ: ದ.ಕ ಜಿಲ್ಲೆಯ ಮೂಡಬಿದ್ರೆ ಬೆಳುವಾಯಿ ಗ್ರಾಮದ ತರುಣಿಯೊಬ್ಬರನ್ನು ಮದುವೆಯಾಗಿದ್ದ ಬೆಂಗಳೂರಿನ ರಾಘವೇಂದ್ರ ಕುಲಕರ್ಣಿ ಎಂಬಾತ ಇದೀಗ ತನ್ನ ಪತ್ನಿಗೆ ವಂಚಿಸಿ ಮತ್ತೊಂದು ಮದುವೆಯಾಗಿದ್ದು, ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ಬಸವೇಶ್ವರ ಬಡವಾಣೆಯ ಅಂದ್ರಳ್ಳಿ ನಿವಾಸಿ ರಾಘವೇಂದ್ರ ಕುಲಕರ್ಣಿ ಎಂಬಾತ 2012 ರ ಜೂನ್ 18 ರಂದು ಮೂಡಬಿದ್ರೆಯ ತರುಣಿಯನ್ನು ಬೆಂಗಳೂರಿನ ಲಗ್ಗೇರಿಯಲ್ಲಿರುವ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ.
ಆದರೆ ಮೂರೇ ದಿನದಲ್ಲಿ ಪತ್ನಿ ಮತ್ತು ಮಗುವನ್ನು ರಾಘವೇಂದ್ರ ಕುಲಕರ್ಣಿ ಮನೆಯಿಂದ ಹೊರಗೆ ಹಾಕಿದ್ದ. ಈ ನಡುವೆ ಕಳೆದ ತಿಂಗಳು ಬೆಂಗಳೂರಿನ ಮಾಗಡಿ ರಸ್ತೆಯ ತಾವರೆ ಕೆರೆಯ ಸಮೀಪದ ಶ್ರೀ ಹೊನ್ನವ ಮಂತ್ರಾಲಯ ಮಠದಲ್ಲಿ ಗೌರಿ ಎಂಬವರೊಂದಿಗೆ ರಾಘವೇಂದ್ರ ಕುಲಕರ್ಣಿ ಮತ್ತೊಂದು ಮದುವೆಯಾಗಿರುತ್ತಾನೆ
ಎಂದು ರಾಘವೇಂದ್ರ ಕುಲಕರ್ಣಿಯ ಎರಡನೇ ಪತ್ನಿ ದೂರು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಮೊದಲು ಕೂಡ ಈತ ಮದುವೆಯಾಗಿ ಪತ್ನಿಗೆ ವಿಚ್ಛೇದನೆ ನೀಡಿದ್ದ, ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ತನ್ನನ್ನು ಮದುವೆಯಾಗಿರುವುದಾಗಿ ಮೂಡಬಿದ್ರೆಯ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ರಾಘವೇಂದ್ರ ತನ್ನ ಎರಡನೇ ಪತ್ನಿಗೆ ವಿಚ್ಛೇದನೆ ನೀಡದೆ ಮೂರನೇ ಮದುವೆಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಕುಲಕರ್ಣಿ, ಆತನ ಸಹೋದರ ನರಹರಿ, ಮಾವ ನರಸಿಂಹ, ಅತ್ತೆ ಗೀತಾ, ಸಹೋದರಿಯರಾದ ಪ್ರೇಮಲಾ,
ಸವಿತಾ ರಂಗನಾಥ್ , ಹಾಗೂ ಬಾವ ನಾಗನಾಥ ಅವರ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.