ಹುಬ್ಬಳ್ಳಿ: ಹಿರಿಯ ನಟ, ರಂಗಕರ್ಮಿ ಜಿ.ಕೆ.ಗೋವಿಂದ ರಾವ್ (86) ಇಂದು ನಸುಕಿನಲ್ಲಿ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಿ.ಕೆ.ಗೋವಿಂದ ರಾವ್ 1937 ರ ಏಪ್ರೀಲ್ 27 ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇಂಗ್ಲೀಷ್ ಸಾಹಿತ್ಯದ ಅಧ್ಯನ ನಡೆಸಿದ ಅವರು ಇಂಗ್ಲೀಷ್ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ರಂಗಭೂಮಿ ಸಿನಿಮಾರಂಗದ ಒಡನಾಟ ಅವರಿಗಿದೆ. ಜಿ.ಕೆ ಗೋವಿಂದರಾವ್ ಬೆಳಿಗ್ಗೆ 4 ಗಂಟೆಗೆ ವಿಧಿವಶರಾಗಿದ್ದು, ವಿಜಯದಶಮಿ ಹಬ್ಬದ ಹಿನ್ನೆಲೆ ಕುಟುಂಬಸ್ಥರು ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ. ಗೋವಿಂದರಾವ್ ಸಾವಿನ ನಂತರ ನೇತ್ರದಾನ ಮಾಡಿದ್ದಾರೆ.
ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು) ಈಶ್ವರ ಅಲ್ಲಾ (ಕಿರು ಕಾದಂಬರಿ), ಶೇಕ್ಸ್ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ಸೇರಿದಂತೆ ಹಲವಾರು ಕೃತಿಗಳನ್ನು ಅವರು ರಚಿಸಿದ್ದಾರೆ. ಮಿಥಿಲೆಯ ಸೀತೆಯರು, ಗೃಹ, ಕರ್ಫ್ಯೂ, ಶಾಸ್ತ್ರಿ ಸೇರಿದಂತೆ ಹಲವು ಚಿತ್ರಗಳಲ್ಲಿ ಗೋವಿಂದ ರಾವ್ ನಟಿಸಿದ್ದರು.