ಬೆಂಗಳೂರು: ಜೋಗಿ ಪ್ರೇಮ್ ನಿದೇರ್ಶನದ ‘ಏಕ್ ಲವ್ ಯಾ’ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಅಚಾತುರ್ಯವೊಂದು ನಡೆದಿದ್ದು, ಅಪ್ಪು ಶ್ರದ್ದಾಂಜಲಿ ವಿಡಿಯೋ ಮುಂದೆ ಶಾಂಪೇನ್ ಸಿಡಿಸಿದ ಗಂಭೀರ ಆರೋಪ ಕೇಳಿ ಬಂದಿತ್ತು.
ನಿನ್ನೆ ರಾತ್ರಿ ಖಾಸಗಿ ಹೋಟೆಲ್ನಲ್ಲಿ ನಡೆದಿದ್ದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್ ನಿರೂಪಕ ಅಕುಲ್ ಬಾಲಾಜಿ ವೇದಿಕೆಯ ಮೇಲಿದ್ದರು. ಈ ವೇಳೆ ಪರದೆಯ ಮೇಲೆ ಅಪ್ಪು ಭಾವಚಿತ್ರದ ವಿಡಿಯೋ ಮೂಡಿದಾಗ ಶಾಂಪೇನ್ ಸಿಡಿಸಿ ಸಾಂಗ್ ರಿಲೀಸ್ ಮಾಡಿ ಸಂಭ್ರಮಿಸಿದ್ದಾರೆ ಎಂದು ಅಪ್ಪು ಅಭಿಮಾನಿಗಳು ಆರೋಪಿಸಿದ್ದರು.
ಇನ್ನು ಘಟನೆ ಕುರಿತು ಸಾ.ರಾ.ಗೋವಿಂದು ಖಂಡನೆ ವ್ಯಕ್ತಪಡಿಸಿದ್ದು, ಪುನೀತ್ ನಿಧನದಿಂದ ಎಲ್ಲರೂ ದುಃಖದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಭಾವಚಿತ್ರದ ಎದುರು ಚಿತ್ರರಂಗದ ಕೆಲವರ ಈ ರೀತಿಯ ವರ್ತನೆ ಖಂಡನೀಯವಾಗಿದೆ ಎಂದಿದ್ದಾರೆ. ನಮ್ಮ ಚಿತ್ರರಂಗದವರೇ ಈ ರೀತಿ ಮಾಡಿದ್ರೆ ಏನು ಹೇಳಬೇಕು? ಇಂತಹ ಘಟನೆಗಳು ಅಭಿಮಾನಿಗಳನ್ನು ಕೆರಳಿಸುವುದು ಸಹಜ. ಆದದ್ದರಿಂದ ತಕ್ಷಣವೇ ಚಿತ್ರತಂಡದವರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದರು.
ಚಿತ್ರತಂಡ ಹೇಳಿದ್ದೇನು..?
ಇವೆಂಟ್ನಲ್ಲಿ ನಡೆದ ಪ್ರಮಾದದ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಇದು ತಾಂತ್ರಿಕ ಸಮಸ್ಯೆಯಿಂದಾಗಿದೆ ಎಂದಿದೆ. ಕಾರ್ಯಕ್ರಮದಲ್ಲಿ ಹಾಡೊಂದನ್ನು ಶಾಂಪೆನ್ ಬಾಟಲ್ ಓಪನ್ ಮಾಡುವ ಮೂಲಕ ರಿಲೀಸ್ ಮಾಡಲು ಪ್ಲಾನ್ ರೂಪಿಸಲಾಗಿತ್ತು. ಶಾಂಪೆನ್ ಓಪನ್ ಆಗುತ್ತಿದ್ದಂತೆ ಹಿಂದೆ ದೊಡ್ಡ ಪರೆದೆಯ ಮೇಲೆ ಹಾಡು ಪ್ಲೇ ಆಗಬೇಕಿತ್ತು. ಆದರೆ ತಾಂತ್ರಿಕ ಅಡಚಣೆಯಿಂದ ಚಿತ್ರದ ಹಾಡಿನ ಬದಲು ಪುನೀತ್ಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಗಿ ಈ ಅಚಾತುರ್ಯ ಸಂಭವಿಸಿದೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ. ಅಲ್ಲದೇ ನಿರ್ದೇಶಕ ಪ್ರೇಮ್, ನಟಿಯರಾದ ರಕ್ಷಿತಾ, ರಚಿತಾ ರಾಮ್ ಕ್ಷಮೆ ಕೇಳಿದ್ದಾರೆ.