ಬೆಳ್ತಂಗಡಿ: ಸಹೋದರರಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆಯ್ಯಲು ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಬಳಿ ನ .23ರ ತಡರಾತ್ರಿ ನಡೆದಿದೆ.
ಹಲ್ಲೆಗೊಳಗಾದವರನ್ನು ನೆಲ್ಲಿಗುಡ್ಡೆ ನಿವಾಸಿಗಳಾದ ಆಟೋ ಚಾಲಕ ಹೈದರ್ ಯಾನೆ ಜಾಕ್ ಹೈದರ್ ಮತ್ತು ಅವರ ಅಣ್ಣ ರಫೀಕ್ ಎನ್ನಲಾಗಿದೆ.
ಅಶುತೋಷ್ ಮತ್ತು ಇತರ ಮೂರು ಮಂದಿ ಕಾರು ಮತ್ತು ಬೈಕ್ ಗಳೊಂದಿಗೆ ಆಗಮಿಸಿ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನ.23 ರಂದು ರಾತ್ರಿ ಹೈದರ್ ಮತ್ತು ರಫೀಕ್ ಆಟೋದಲ್ಲಿ ಬಾಡಿಗೆ ಹೋಗಿ ಹಿಂತಿರುಗಿ ಮನೆಯ ಕಡೆಗೆ ತೆರಳುತ್ತಿದ್ದ ವೇಳೆ ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಬಳಿಯಲ್ಲಿ ಅಶುತೋಷ್ ಮತ್ತು ಇತರ ಮೂರು ಮಂದಿ ಕಾರು ಮತ್ತು ಬೈಕ್ ಗಳೊಂದಿಗೆ ಅಟೋ ರಿಕ್ಷಾವನ್ನು ಅಡ್ಡಕಟ್ಟಿ ಕಣ್ಣಿಗೆ ಮೆಣಸಿನ ಹುಡಿ ಎರಚಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲ್ಲೆಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರ ಪೈಕಿ ಹೈದರ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಸ್ಥಳೀಯರು ಆಟೋ ರಿಕ್ಷಾದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ಪಡೆದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಠಾಣೆ ಪೊಲೀಸರು ಕೃತ್ಯ ನಡೆದ ಎರಡು ಗಂಟೆಯೊಳಗಡೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ನೇತತ್ವದ ತಂಡದ ಹೆಡ್ ಕಾನ್ಸ್ಟೇಬಲ್ ಗಳಾದ ವೆಂಕಪ್ಪ, ಇಬ್ರಾಹಿಂ ಗರ್ಡಾಡಿ, ಕಾನ್ಸ್ಟೇಬಲ್ ಗಳಾದ ಬಸವರಾಜ್, ಲತೀಫ್ ಮತ್ತಿತರರು ಭಾಗವಹಿಸಿದ್ದರು.