ಬೆಳ್ತಂಗಡಿ: ಕಮ್ಯುನಿಸ್ಟ್ ಪಕ್ಷದ ಸದಸ್ಯ ಶೇಖರ್ ಎಂಬುವವರು ಎಸಿಬಿ,ಇಡಿಗೆ ಶಾಸಕ ಹರೀಶ್ ಪೂಂಜಾ ರವರ ವಿರುದ್ಧ ದೂರು ನೀಡಿದ್ದಾರೆ.
ಬಳಂಜ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಹೊಗಳುವ ಭರದಲ್ಲಿ ಶಾಸಕರ ಸಾಧನೆ ಮತ್ತು ಕಾರ್ಯವೈಖರಿಯನ್ನು ಪ್ರತ್ಯಕ್ಷವಾಗಿ ನೋಡಿರುವ ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಬಳಂಜ ರವರು ತಮ್ಮ ಭಾಷಣದಲ್ಲಿ ಶಾಸಕರ ಸಾಧನೆಯನ್ನು ವರ್ಣಿಸುತ್ತಾ, “ಶಾಸಕ ಹರೀಶ್ ಪೂಂಜ ರವರ ಮನೆಗೆ ನಾನು ಹೋಗಿದ್ದೆ. ಪೂಂಜರವರು ಒಳಗೆ ಹೋಗಿ 10,000ರೂ ಹಣವನ್ನು ಒಂದು ಹೆಂಗಸಿಗೆ ಕೊಟ್ಟರು. ಬಳಂಜದ ಬಾಲಕೃಷ್ಣ ಪೂಜಾರಿ ಅವರು ಹೋಗಿದ್ದರು ಅವರಿಗೂ 10,000 ರೂ ಕೊಟ್ಟರು” ಎಂಬ ಹೇಳಿಕೆಯೊಂದನ್ನು ನೀಡಿದರು ಎನ್ನಲಾಗಿದೆ.
ಆದುದರಿಂದ ಶ್ರಮಿಕ ಕಚೇರಿಯಲ್ಲಿ ಹಾಗೂ ಶಾಸಕರ ಮನೆಯಲ್ಲಿ ಈ ರೀತಿಯ ಚೀಲಗಳಲ್ಲಿ ಹಣವಿರುವ ಎಲ್ಲಾ ಸಂಭವವಿರುವುದರಿಂದ ಈ ಕೂಡಲೇ ಶಾಸಕರ ಕಚೇರಿ ಮತ್ತು ಮನೆಯ ಶೋಧ ನಡೆಸಬೇಕಾಗಿ ಕೋರುತ್ತೇವೆ. ಈ ರೀತಿ ಬಂದವರಿಗೆ 10,000ರೂ, 20,000ರೂ ಹಣವನ್ನು ಶಾಸಕರು ನೀಡುತ್ತಾರೆಂದರೆ ಅವರಲ್ಲಿ ಆದಾಯಕ್ಕೆ ಮೀರಿದ ಹಣವಿರಬೇಕು ಆ ಹಣದ ಮೂಲ ಬಹಿರಂಗವಾಗಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಅವರ ಹೇಳಿಕೆ ಆಧಾರವನ್ನು ಪರಿಗಣಿಸಿ, ಶಾಸಕ ಹರೀಶ್ ಪೂಂಜ ರವರ ವಿರುದ್ಧ ಕೇಸು ದಾಖಲಿಸಿ ಅವರ ಮನೆ ಮತ್ತು ಕಚೇರಿಯ ಶೋಧ ಕಾರ್ಯ ನಡೆಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಹರೀಶ್ ವೈ ಚಂದ್ರಮ ಬಳೆಂಜ ರವರನ್ನು ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಕಮ್ಯುನಿಸ್ಟ್ ಪಕ್ಷದ ಸದಸ್ಯ ಶೇಖರ್ ರವರು ದೂರಿನಲ್ಲಿ ತಿಳಿಸಿದ್ದಾರೆ.