ಬೆಳ್ತಂಗಡಿ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಸೂಚಿಸಿದರೆ ಮುಸ್ಲಿಮರ ಮತ ಬೇಡ ಎಂದು ಹೇಳಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಚೇರಿಗೆ ಮುಸ್ಲಿಮರು ಧರಿಸುವ ಟೋಪಿ ಮತ್ತು ಶಾಲು ರವಾನಿಸಲಾಗಿದೆ.
ಹರೀಶ್ ಪೂಂಜಾ ಅವರು ಹೇಳಿಕೆ ನೀಡಿರುವುದಕ್ಕೆ ಪ್ರತಿಯಾಗಿ ಬೆಳ್ತಂಗಡಿ ತಾಲೂಕಿನ ಭಾರತ ಕಮ್ಯುನಿಸ್ಟ್ ಪಕ್ಷ(ಎಂ) ಸಮಿತಿಯ ಸದಸ್ಯ ಶೇಖರ ಲಾಯಿಲ ಪ್ರತಿಭಟನಾ ಸೂಚಕವಾಗಿ ಪತ್ರದ ಜೊತೆ ಮುಸ್ಲಿಮರ ಪೇಟ ಮತ್ತು ಶಾಲನ್ನು ಶಾಸಕರ ಕಚೇರಿಗೆ ಕಳುಹಿಸಿದ್ದು, ಒಂದು ಕಡೆ ಮುಸ್ಲಿಮರ ಮತ ಬೇಡವೆಂದು ಸಾರ್ವಜನಿಕವಾಗಿ ಹೇಳುವುದು ಮತ್ತೊಂದು ಕಡೆ ಅದೇ ಸಮುದಾಯದವರ ಸಮಾವೇಶ ನಡೆಸಿ ಓಲೈಕೆ ಮಾಡುವ ರಾಜಕೀಯ ಬುದ್ಧಿ ಬಿಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಒಂದು ಸಮುದಾಯವನ್ನು ಚುನಾವಣೆಗೆ ತಯಾರು ಮಾಡುವ ಉದ್ದೇಶದಿಂದ ಸಾರ್ವಜನಿಕ ಸಭೆಯಲ್ಲಿ ಅದರಲ್ಲೂ ಧಾರ್ಮಿಕ ಸಭೆಯಲ್ಲಿ ನನಗೆ ಮುಸ್ಲಿಮರ ಮತ ಬೇಡ ಎಂದು ಹೇಳುವುದು ಒಬ್ಬ ಬದ್ಧತೆಯುಳ್ಳ ಶಾಸಕನಿಗೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮರ ಮತ ಬೇಡವೆಂದ ಶಾಸಕನ ನೇತೃತ್ವದಲ್ಲಿ ಜೂ.22 ರಂದು ಬೆಳ್ತಂಗಡಿಯಲ್ಲಿ ‘ಅಲ್ಪಸಂಖ್ಯಾತರ ಸಮಾವೇಶ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಬಿಜೆಪಿಯ ದ್ವಂದ್ವ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಿದ್ದಾರೆ.